ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ದ.ಆಫ್ರಿಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯವು ನಾಳೆ ನಡೆಯಲಿದೆ. ಟೆಸ್ಟ್ನಲ್ಲಿ ಸರಣಿ ಸೋತ ಭಾರತವು ಸೀಮಿತ ಓವರು ಕ್ರಿಕೆಟಿನಲ್ಲಿ ತನ್ನ ಮೇಲುಗೈ ಸಾಧಿಸಲು ಯೋಜಿಸುತ್ತಿದೆ.
ಸೀಮಿತ ಓವರುಗಳ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿರುವ ಕೆ.ಎಲ್. ರಾಹುಲ್ ತಮ್ಮ ಮೇಲಿನ ಹೊಸ ಹೊಣೆಗಾರಿಕೆಯನ್ನು ಹೇಗೆ ನಿಭಾಯಿಸುತ್ತಾರೆಂಬ ಕುತೂಹಲವಿದೆ. ಟೆಸ್ಟ್ ನಾಯಕತ್ವಕ್ಕೂ ಅವರ ಹೆಸರು ಕೇಳಿಬರುತ್ತಿರುವುದರಿಂದ ಈ ಏಕದಿನ ಸರಣಿಯಲ್ಲಿ ರಾಹುಲ್ ಉತ್ತಮ ನಾಯಕತ್ವ ಗುಣ ತೋರಿಸಲು ಆದ್ಯತೆ ಕೊಡಲಿದ್ದಾರೆ. ಇದೇವೇಳೆ, ನಾಯಕತ್ವದ ಹೊಣೆಗಾರಿಕೆಯನ್ನು ಮತ್ತು ಒತ್ತಡವನ್ನು ಕಳಚಿಕೊಂಡಿರುವ ವಿರಾಟ್ ಕೊಹ್ಲಿ ನಿರ್ವಹಣೆಯ ಕುರಿತಂತೆಯೂ ಎಲ್ಲರಲ್ಲಿ ಕುತೂಹಲ ಮೂಡಿದೆ.
ರಾಹುಲ್ ಅವರು ಶಿಖರ್ ಧವನ್ ಜತೆಗೆ ಇನ್ನಿಂಗ್ಸ್ ಆರಂಭಿಸುವರೆ ಅಥವಾ ಹಿಂದಿನಂತೆ ಮಧ್ಯಮ ಸರದಿಯಲ್ಲಿ ಬರುವರೆ ಎಂಬುದು ಖಚಿತವಾಗಿಲ್ಲ. ಅವರು ಆರಂಭಿಕರಾಗಿ ಬಂದರೆ ಋತುರಾಜ್ ಗಾಯಕ್ವಾಡ್ ತಮ್ಮ ಚೊಚ್ಚಲ ಪಂದ್ಯಕ್ಕಾಗಿ ಇನ್ನೂ ಕಾಯಬೇಕಾಗಬಹುದು.
ಕೊಹ್ಲಿ ನಂಬರ್ 3ನೇ ಕ್ರಮಾಂಕದಲ್ಲಿ ಬಂದರೆ, ನಾಲ್ಕನೇ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಮಧ್ಯೆ ಪೈಪೋಟಿಯಿದೆ. ವೆಂಕಟೇಶ್ ಆಯ್ಯರ್ ಆಲ್ರೌಂಡರ್ನ ನೆಲೆಯಲ್ಲಿ ಚೊಚ್ಚಲ 50 ಓವರುಗಳ ಅಂತಾರಾಷ್ಟ್ರೀಯ ಪಂದ್ಯ ಆಡುವ ಸಾಧ್ಯತೆ ಹೆಚ್ಚಿದೆ.
ಬೂಮ್ರಾ ಮತ್ತು ಭುವನೇಶ್ವರ ಕುಮಾರ್ ವೇಗದ ಬೌಲಿಂಗ್ನ ಮುಂಚೂಣಿ ವಹಿಸಿದರೆ, ಸ್ಪಿನ್ ಬೌಲಿಂಗ್ನ ಹೊಣೆ ಅಶ್ವಿನ್ ಮತ್ತು ಚಾಹಲ್ ಮೇಲೆ ಬೀಳಲಿದೆ.