ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸರ್ಕಾರ ಆಯೋಜಿಸಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮ ಇಂದು ನಡೆಯಲಿದೆ. ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಈಗಾಗಲೇ 1.15 ಕೋಟಿ ಜನ ನೋಂದಣಿ ಮಾಡಿಸಿದ್ದಾರೆ. ಆನ್ಲೈನ್ ಹಾಗೂ ಆಫ್ಲೈನ್ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಾವಿರಾರು ಮಂದಿ ಗೀತ ಗಾಯನಕ್ಕೆ ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 50 ಸಾವಿರ ಮಂದಿ ಆಯ್ದ ಆರು ಹಾಡುಗಳನ್ನು ಸಾಮೂಹಿಕವಾಗಿ ಹಾಡಲಿದ್ದಾರೆ. ವಿಧಾನಸೌಧದ ಮೆಟ್ಟಿಲು, ಎಲ್ಲ ಮೆಟ್ರೊ ನಿಲ್ದಾಣಗಳು, ವಿಮಾನ ನಿಲ್ದಾಣ, ಬಸ್ ನಿಲ್ದಾಣ, ಆಟೋ ನಿಲ್ದಾಣ, ಕಾರಾಗೃಹ, ಐಟಿಬಿಟಿ ಸಂಸ್ಥೆಗಳು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಹಾಗೂ ಲಾಲ್ಬಾಗ್ನಲ್ಲಿ ಗೀತ ಗಾಯನ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ.
41 ದೇಶಗಳು, 27 ರಾಜ್ಯಗಳು, 18,800 ಸಂಘ-ಸಂಸ್ಥೆಗಳು, 10 ಸಾವಿರಕ್ಕೂ ಅಧಿಕ ಸ್ಥಳಗಳಲ್ಲಿ ಕನ್ನಡದ ಹಾಡುಗಳು ಮೊಳಗಲಿವೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾರ್ಯಕ್ರಮ ರೂಪಿಸುವಂತೆ ಶಾಸಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಲಹೆ ನೀಡಿದೆ.
ಮೈಸೂರು ಅರಮನೆ, ಚಿತ್ರದುರ್ಗ ಕೋಟೆ, ಮಂಗಳೂರು, ತುಮಕೂರು ಸಿದ್ದಗಂಗಾ ಮಠ ಮುಂತಾದ ಪ್ರವಾಸಿ ತಾಣಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಅಭಿಯಾನಕ್ಕಾಗಿ ಸರ್ಕಾರ ಪೋರ್ಟಲ್ ಹಾಗೂ ಫೇಸ್ಬುಕ್ ಪುಟ ರಚಿಸಿದ್ದು, ನೋಂದಣಿ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
- ಯಾವ ಹಾಡುಗಳು
ಜಯ ಭಾರತ ಜನನಿಯ ತನುಜಾತೆ
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ವಿಶ್ವ ವಿನೂತನ ವಿದ್ಯಾ ಚೇತನ
ಹಚ್ಚೇವು ಕನ್ನಡದ ದೀಪ
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ಬಾರಿಸು ಕನ್ನಡ ಡಿಂಡಿಮವ