ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೇ ತಿಂಗಳ 8ರಂದು ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ. ಹೀಗಾಗಿ ನವೆಂಬರ್ 8ರಂದು ತಿರುಮಲ ಶ್ರೀವಾರಿ ದೇವಸ್ಥಾನವನ್ನು ಮುಚ್ಚಲಾಗುತ್ತಿದ್ದು, ಸರ್ವದರ್ಶನ ಟೋಕನ್ಗಳ ವಿತರಣೆಯನ್ನು ರದ್ದುಗೊಳಿಸಲಾಗಿದೆ. ಗ್ರಹಣ ಕಾಲದಲ್ಲಿ ಅನ್ನಪ್ರಸಾದ ವಿತರಣೆ ನಿಲ್ಲಿಸಲಾಗುತ್ತದೆ.
ಚಂದ್ರಗ್ರಹಣ ದಿನದಂದು ತಿರುಮಲ ಶ್ರೀವಾರಿ ದೇವಸ್ಥಾನದ ಬಾಗಿಲು 12 ಗಂಟೆಗಳ ಕಾಲ ಮುಚ್ಚಲಾಗುವುದು ಎಂದು ಟಿಟಿಡಿ ತಿಳಿಸಿದೆ. ಬ್ರೇಕ್ ದರ್ಶನ, ಶ್ರೀವಾಣಿ, ರೂ.300/- ವಿಶೇಷ ಪ್ರವೇಶ ದರ್ಶನ, ಇತರೆ ಆರ್ಜಿತ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಗ್ರಹಣದ ಸಮಯದ ನಂತರ ವೈಕುಂಠಂ-2 ರಿಂದ ಮಾತ್ರ ಭಕ್ತರಿಗೆ ಪ್ರವೇಶ ನೀಡಲಾಗುವುದು ಎಂದು ಟಿಟಿಡಿ ತಿಳಿಸಿದೆ. 8ರಂದು ಮಧ್ಯಾಹ್ನ 2.39ರಿಂದ 6.27ರವರೆಗೆ ಚಂದ್ರಗ್ರಹಣವಿರುತ್ತದೆ.
ಬೆಳಗ್ಗೆ 8.40ರಿಂದ ಸಂಜೆ 7.20ರವರೆಗೆ ಶ್ರೀವಾರಿ ದೇವಸ್ಥಾನದ ಬಾಗಿಲು ಮುಚ್ಚಲಾಗುವುದು. ತಿರುಮಲದಲ್ಲಿರುವ ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಭವನ ಮತ್ತು ವೈಕುಂಠಂ ಕ್ಯೂ ಕಾಂಪ್ಲೆಕ್ಸ್ನ ಇತರ ಪ್ರದೇಶಗಳಲ್ಲಿ ಅನ್ನಪ್ರಸಾದ ವಿತರಣೆಯನ್ನು ನಿಲ್ಲಿಸಲಾಗುವುದು. ಪುನಃ ರಾತ್ರಿ 8.30ರಿಂದ ಭಕ್ತರಿಗೆ ಅನ್ನಸಂತರ್ಪಣೆ ಆರಂಭವಾಗಲಿದೆ ಎಂದು ಟಿಟಿಡಿ ವಿವರಿಸಿದೆ.