ಹೊಸದಿಗಂತ ವರದಿ,ಮಡಿಕೇರಿ:
ಶ್ರೀಮಂಗಲ – ಕುಟ್ಟ ನಡುವಿನ ಕಾಯಿಮನೆ, ಮಂಚಳ್ಳಿ ಗ್ರಾಮದ ರಸ್ತೆಯಲ್ಲಿ ಭೂಕುಸಿತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲಾ ವರ್ಗದ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ಭಾರೀ ಮಳೆಯಿಂದ ಕುಟ್ಟ ರಾಜ್ಯ ಹೆದ್ದಾರಿಯ ಸಂ. 89ರ ಕಿ.ಮೀ. 80.40ರಲ್ಲಿನ (ಮಂಚಳ್ಳಿ ಗ್ರಾಮ, ಶ್ರೀಮಂಗಲ ಹೋಬಳಿ) ರಸ್ತೆ ಭಾಗದಲ್ಲಿ ಕುಸಿತ ಉಂಟಾಗಿದೆ. ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ನೀಡಿರುವ ವರದಿಯಂತೆ ಜಿಲ್ಲೆಯಲ್ಲಿ ಮುಂದಿನ ಕೆಲವು ದಿನಗಳ ಕಾಲ ಅತಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ, ಮಡಿಕೇರಿ ಕುಟ್ಟ ರಾಜ್ಯ ಹೆದ್ದಾರಿಯ ಸಂ. 89ರ ಕಿ.ಮೀ. 80.40ರಲ್ಲಿನ (ಮಂಚಳ್ಳಿ ಗ್ರಾಮ, ಶ್ರೀಮಂಗಲ ಹೋಬಳಿ) ರಸ್ತೆ ಭಾಗದಲ್ಲಿ ಜು.29ರಿಂದ ಆ.27ರವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶ ಹೊರಡಿಸಿದ್ದಾರೆ.
ಬದಲಿ ರಸ್ತೆ: ಸಾರ್ವಜನಿಕರು ಈ ರಸ್ತೆಯ ಬದಲಾಗಿ ಕುಟ್ಟ – ಕೇಂಬುಕೊಲ್ಲಿ-ಕಾನೂರು ಜಿಲ್ಲಾ ಮುಖ್ಯ ರಸ್ತೆಯ ಮುಖಾಂತರ ಕುಟ್ಟ – ಪೊನ್ನಂಪೇಟೆ ನಡುವೆ ಸಂಚರಿಸಬಹುದಾಗಿದೆ. ( ಅಂತರ 30.00 ಕಿ.ಮೀ) ಅಥವಾ ಶ್ರೀಮಂಗಲ – ನಾಲ್ಕೇರಿ ಜಿಲ್ಲಾ ಮುಖ್ಯ ರಸ್ತೆಯ ಮೂಲಕ (6.00 ಕಿ.ಮೀ) ಅಥವಾ ಕಾಕೂರು -ಹೇರ್ಮಾಡು-ಬೊಳ್ಳರಿಗೇಟ್ ಜಿಲ್ಲಾ ಮುಖ್ಯ ರಸ್ತೆಯ ಮುಖಾಂತರ (6.90 ಕಿ.ಮೀ). ಸಂಚರಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.