ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ನಳಂದಾ ಜಿಲ್ಲೆಯಲ್ಲಿ ದೊಡ್ಡ ರೈಲು ಅಪಘಾತ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದೆ.
ಮಗಧ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ರೈಲಿನ ಮಧ್ಯೆ ಡಿಕ್ಕಿಯಾಗಬೇಕು ಎನ್ನುವಷ್ಟರಲ್ಲಿ ಹಠಾತ್ ಬ್ರೇಕ್ ಹಾಕಲಾಗಿದೆ. ಇದರಿಂದ ಸಂಭವನೀಯ ಅಪಘಾತದಿಂದ ಪಾರಾಗಿದೆ.
ದೆಹಲಿಯಿಂದ ಹೊರಟಿದ್ದ ಮಗಧ ಎಕ್ಸ್ಪ್ರೆಸ್ ರೈಲು ಪಾಟ್ನಾ ಮೂಲಕ ಇಸ್ಲಾಂಪುರಕ್ಕೆ ತೆರಳುತ್ತಿತ್ತು. ಹಾದಿ ಮಧ್ಯೆ ಬಿಹಾರದ ನಳಂದಾ ಜಿಲ್ಲೆಯ ಹಿಲ್ಸಾ ನಿಲ್ದಾಣದಲ್ಲಿ ನಿಲುಗಡೆಯಾಗಿತ್ತು. ಈ ವೇಳೆ, ಅದೇ ಮಾರ್ಗವಾಗಿ ಗೂಡ್ಸ್ ರೈಲೊಂದು ಇಸ್ಲಾಂಪುರದಿಂದ ದಹಿಯಾವಾನ್ ಕಡೆಗೆ ಬರುತ್ತಿತ್ತು. ಸರಕನ್ನು ಸಾಗಿಸುತ್ತಿದ್ದ ರೈಲು ನಿಧಾನವಾಗಿ ಚಲಿಸುತ್ತಿದ್ದ ಕಾರಣ ಮಗಧ ಎಕ್ಸ್ಪ್ರೆಸ್ ರೈಲಿನ ಪಕ್ಕದಲ್ಲೇ ದಿಢೀರ್ ಬ್ರೇಕ್ ಹಾಕಿ ನಿಂತಿದೆ.
ಎರಡೂ ರೈಲುಗಳಿಗೆ ಹಿಲ್ಸಾ ಸ್ಟೇಷನ್ನಲ್ಲಿ ಒಂದೇ ಮಾರ್ಗದ ಸೂಚನೆ ನೀಡಲಾಗಿದೆ. ಇದರಿಂದಾಗಿ ಮಗಧ ರೈಲು ಬಂದು ನಿಂತಿದೆ. ಹಾಗಿದ್ದಾಗ್ಯೂ ಗೂಡ್ಸ್ ರೈಲಿಗೂ ಅದೇ ಹಳಿಯನ್ನು ಸ್ಟೇಷನ್ ಮಾಸ್ಟರ್ ಸೂಚಿಸಿದ್ದಾರೆ. ಹೀಗಾಗಿ ಎರಡೂ ರೈಲುಗಳು ಒಂದೇ ಹಳಿಗೆ ಬಂದಿವೆ.
ರೈಲ್ವೇ ಸ್ಟೇಷನ್ ಮಾಸ್ಟರ್ ಕಾರಣ:
ಗೂಡ್ಸ್ ರೈಲು ದಿಢೀರ್ ಮಗಧ ಎಕ್ಸ್ಪ್ರೆಸ್ ಹಿಂದೆಯೇ ಬಂದು ನಿಂತಾಗ ಭಯಗೊಂಡ ಪ್ರಯಾಣಿಕರು ಓಡಿ ಹೋಗಿದ್ದಾರೆ. ಬಳಿಕ ಆಘಾತಗೊಂಡ ಪ್ರಯಾಣಿಕರು ಹಳಿಯ ಮೇಲೆ ಬಂದು ಗಲಾಟೆ ಮಾಡಿದ್ದಾರೆ. ರೈಲ್ವೆ ಸ್ಟೇಷನ್ ಮಾಸ್ಟರ್ ನಿರ್ಲಕ್ಷ್ಯದಿಂದಾಗಿ ಈ ದುರಂತ ಸಂಭವಿಸಲಿತ್ತು. ಆದರೆ, ಚಾಲಕನ ಮುನ್ನೆಚ್ಚರಿಕೆಯಿಂದ ಅನಾಹುತ ತಪ್ಪಿದೆ.