ಹೊಸದಿಗಂತ ವರದಿ, ಮಡಿಕೇರಿ/ಸೋಮವಾರಪೇಟೆ:
ಸಂಚಾರಿ ನಿಯಮ ಉಲ್ಲಂಘನೆಗಾಗಿ ಬೈಕ್ ಸವಾರನೊಬ್ಬನಿಗೆ ಸೋಮವಾರಪೇಟೆ ಪ್ರಿನ್ಸಿಪಲ್ ಸಿವಿಲ್ ಮತ್ತು ಜೆಎಂಎಫ್’ಸಿ ನ್ಯಾಯಾಲಯ ಬರೋಬ್ಬರಿ 23,500 ರೂ. ದಂಡ ವಿಧಿಸಿದೆ.
ಸೋಮವಾರಪೇಟೆ ಕಲ್ಕಂದೂರು ಗ್ರಾಮದ ನಿವಾಸಿ ಅಬ್ದುಲ್ ಅಜೀಜ್ ಎಂಬವರ ಪುತ್ರ ಕೆ.ಎ. ಮಹಮ್ಮದ್ ರಮೀಜ್ ಎಂಬಾತನೇ ದಂಡ ತೆತ್ತ ಬೈಕ್ ಸವಾರನಾಗಿದ್ದಾನೆ.
ಆರೋಪಿಯು ಸೋಮವಾರಪೇಟೆ ನಗರದಲ್ಲಿ ಸೈಲೆನ್ಸರ್ ಮಾರ್ಪಡಿಸಿ, ಜೋರಾಗಿ ಶಬ್ದ ಮಾಡುತ್ತಾ ಹೆಲ್ಮೆಟ್ ಧರಿಸದೆ ಅಪಾಯಕಾರಿಯಾಗಿ ಬೈಕ್ ಚಾಲನೆ ಮಾಡುತ್ತಿದ್ದರಿಂದ ಮತ್ತು ಹಾನಿಗೊಳಗಾದ ನಂಬರ್ ಪ್ಲೇಟ್ ಅಳವಡಿಸಿದ್ದರಿಂದ ಹಾಗೂ ದಾಖಲಾತಿಗಳನ್ನು ಹಾಜರುಪಡಿಸದಿದ್ದುರಿಂದ ಸೋಮವಾರಪೇಟೆ ವೃತ್ತ ನಿರೀಕ್ಷಕ ಎಂ. ಮುದ್ದು ಮಾದೇವ ಅವರು ಪ್ರಕರಣ ದಾಖಲಿಸಿ ಸೋಮವಾರಪೇಟೆ ಪ್ರಿನ್ಸಿಪಲ್ ಸಿವಿಲ್ ಮತ್ತು ಜೆಎಂಎಫ್’ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ. ಗೋಪಾಲಕೃಷ್ಣ ಅವರು ಈ ಎಲ್ಲಾ ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ರೂ. 23,500 ದಂಡ ವಿಧಿಸಿ ತೀರ್ಪಿತ್ತಿದ್ದಾರೆ.