ಹೊಸ ದಿಗಂತ ವರದಿ, ಕಾರವಾರ:
ಬ್ರೇಕ್ ಫೇಲ್ ಆದ ಪರಿಣಾಮ ಸಾರಿಗೆ ಸಂಸ್ಥೆಯ ಬಸ್ಸು ರಸ್ತೆ ಪಕ್ಕದ ಹೊಂಡಕ್ಕೆ ಬಿದ್ದ ಘಟನೆ ತಾಲೂಕಿನ ಅರ್ಗಾ ಸಂಕ್ರುಭಾಗ ಬಳಿ ಸಂಭವಿಸಿದ್ದು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 7 ಜನರಿಗೆ ತೀವ್ರ ಗಾಯಗಳಾಗಿದ್ದು, ಸುಮಾರು 20 ಕ್ಕೂ ಹೆಚ್ಚು ಜನರಿಗೆ ಸಾದಾ ಸ್ವರೂಪದ ಗಾಯಗಳಾಗಿವೆ.
ಅರ್ಗಾ ನೌಕಾನೆಲೆ ಪ್ರದೇಶದಲ್ಲಿ ಗುತ್ತಿಗೆ ಕಂಪನಿಯವರು ನಡೆಸುತ್ತಿರುವ ಕಾಮಗಾರಿಯಲ್ಲಿ ಕೆಲಸ ಮಾಡಲು ಕಾರವಾರ ಮತ್ತು ಬಿಣಗಾ ಭಾಗದಿಂದ ಸುಮಾರು 40 ರಷ್ಟು ಕಾರ್ಮಿಕರು ಒಪ್ಪಂದದ ಮೇರೆಗೆ ಪಡೆದುಕೊಂಡ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಕಾಮಗಾರಿ ಸ್ಥಳಕ್ಕೆ ಹೋಗುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ.
ಬಸ್ಸಿನ ಬ್ರೇಕ್ ಫೇಲ್ ಆಗಿ ಬಸ್ಸು ನೌಕಾನೆಲೆ ಪ್ರದೇಶದ ಗೋಡೆಗೆ ಬಡಿದು ಪಕ್ಕದಲ್ಲಿದ್ದ ಹೊಂಡದಲ್ಲಿ ಹೋಗಿ ನಿಂತಿದೆ.
ಬಸ್ ನಿಯಂತ್ರಣ ತಪ್ಪುತ್ತಿರುವ ಸಂದರ್ಭದಲ್ಲಿ ಚಾಲಕ ಸಮಯ ಪ್ರಜ್ಞೆಯಿಂದ ಬಸ್ಸನ್ನು ನಿಯಂತ್ರಿಸುವ ಪ್ರಯತ್ನ ಮಾಡಿರುವುದರಿಂದ
ಹೆಚ್ಚಿನ ಅನಾಹುತ ನಡೆಯುವುದು ತಪ್ಫಿದಂತಾಗಿದೆ.
ಕಾರವಾರ ಘಟಕದಿಂದ ಗ್ರಾಮೀಣ ಪ್ರದೇಶಗಳಿಗೆ ಸಾಗುವ ಬಹಳಷ್ಟು ಬಸ್ಸುಗಳು ತಾಂತ್ರಿಕ ದೋಷ ಹೊಂದಿದ್ದು ಇದರಿಂದಾಗಿ ಹಲವು ಅಪಘಾತಗಳು ಸಂಭವಿಸುತ್ತಿವೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿದ್ದು ಮಂಗಳೂರು, ಹುಬ್ಬಳ್ಳಿ ಮೊದಲಾದ ದೂರದ ಪ್ರದೇಶಗಳಿಗೂ ಸೂಕ್ತ ನಿರ್ವಹಣೆ ಇಲ್ಲದ ಹಳೆಯ ಬಸ್ಸುಗಳನ್ನು ಓಡಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಎರಡು ದಿನಗಳ ಹಿಂದೆ ಹಬ್ಬುವಾಡದಲ್ಲಿ ಸಾರಿಗೆ ಸಂಸ್ಥೆಯ ಬಸ್ಸಿನ ಬ್ಲೇಡ್ ತುಂಡಾಗಿ ಹಿಂಬದಿಯ ಚಕ್ರಗಳು ಕಿತ್ತು ಹೋಗಿ ಅನಾಹುತ ಸಂಭವಿಸುವುದು ತಪ್ಪಿರುವುದನ್ನು ಇಲ್ಲಿ ಸ್ಮರಿಸಬಹುದು.