ಹೊಸದಿಗಂತ ಡಿಜಿಟಲ್ ಡೆಸ್ಕ್
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಮಾಡಿದಂತ ಅವ್ಯಹಾರ ಸಂಬಂಧ, ಈಗ ಸಂಕಷ್ಟ ಎದುರಾಗಿದೆ. ನಾಳೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ.
ಈ ಸಂಬಂಧ ನೋಟಿಸ್ ಹೊರಡಿಸಿರುವ ವಸತಿ ಇಲಾಖೆಯ ಕಾರ್ಯದರ್ಶಿ ಡಾ.ಜೆ ರವಿಶಂಕರ್ ಅವರು, ನಾಳೆ ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿರುವಂತ 106ನೇ ಕೊಠಡಿಯಲ್ಲಿ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿದ್ದಾರೆ.
ರೋಹಿಣಿ ಸಿಂಧೂರಿಯವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಂತ ಸಂದರ್ಭದಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೂರ್ವಾನುಮತಿ ಇಲ್ಲದೇ 14.71 ಲಕ್ಷ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಗಳನ್ನು 14 ಕೋಟಿಗೆ ಖರೀದಿಸಿದ್ದರು. ಈ ಬ್ಯಾಗ್ ಗಳು 10 ರಿಂದ 13 ರೂ ಗೆ ಸಿಗ್ತಾ ಇತ್ತು. ಆದ್ರೇ ಡಿಸಿಯಾಗಿ 52 ರೂ ಕೊಟ್ಟು ಖರೀದಿಸಿದ್ದಾರೆ. ಇದರಲ್ಲಿ ಅವ್ಯವಹಾರ ನಡೆದಿದೆ ಎಂಬುದಾಗಿ ಶಾಸಕ ಸಾ.ರಾ ಮಹೇಶ್ ತನಿಖೆಗೆ ಸರ್ಕಾರಕ್ಕೆ ಪತ್ರಬರೆದಿದ್ದರು.
ಡಿಸಿ ನಿವಾಸದಲ್ಲಿ ಈಜುಕೊಳ ನಿರ್ಮಾಣ, ಪಾರಂಪರಿಕ ಮಾರ್ಗಸೂಚಿ ನಿಯಮವನ್ನು ಉಲ್ಲಂಘಿಸಿ ವೆಟ್ರಿಫೈಡ್ ಟೈಲ್ಸ್ ಅಳವಡಿಕೆ, ಕೋವಿಡ್ ಸಂದರ್ಭದಲ್ಲಿ ಮೃತರ ಸಂಖ್ಯೆ ತಪ್ಪು ಮಾಹಿತಿ ನೀಡಿದ್ದು, ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಕಾರಣ ಸೇರಿದಂತೆ ವಿವಿಧ ದೂರುಗಳನ್ನು ಶಾಸಕರು ರೋಹಿಣಿ ವಿರುದ್ಧ ಸರ್ಕಾರಕ್ಕೆ ನೀಡಿದ್ದರು. ಈ ಹಿನ್ನಲೆಯಲ್ಲಿಯೇ ನಾಳೆ ವಿವರಣೆ ನೀಡುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.