ಹೊಸದಿಗಂತ ಡಿಜಿಟಲ್ ಡೆಸ್ಕ್:
ಟರ್ಕಿ-ಸಿರಿಯಾ ಭೂಕಂಪದ ಅವಶೇಷಗಳಡಿ ಸಿಕ್ಕಿ ಪ್ರಾಣಕಳೆದುಕೊಂಡವರ ಸಂಖ್ಯೆ 24,000 ದಾಟಿದೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ (SMH) ವರದಿ ಮಾಡಿದೆ. ಸಾವಿನ ದುರ್ವಾಸನೆ ಟರ್ಕಿಯ ಪೂರ್ವ ನಗರವಾದ ಕಹ್ರಮನ್ಮರಸ್ನಲ್ಲಿ ತೂಗಾಡುತ್ತಿದೆ.
ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಭಾರಿ ಭೂಕಂಪಕ್ಕೆ ಅಧಿಕಾರಿಗಳು ವೇಗವಾಗಿ ಪ್ರತಿಕ್ರಿಯಿಸಬೇಕಿತ್ತು, ಸರ್ಕಾರದ ಪ್ರತಿಕ್ರಿಯೆಯು ಸಾಧ್ಯವಿರುವಷ್ಟು ವೇಗವಾಗಿಲ್ಲ ಎಂದು ಒಪ್ಪಿಕೊಂಡರು. “ನಾವು ಇದೀಗ ವಿಶ್ವದಲ್ಲೆ ಅತಿದೊಡ್ಡ ಹುಡುಕಾಟ ಮತ್ತು ಪಾರುಗಾಣಿಕಾ ತಂಡವನ್ನು ಹೊಂದಿದ್ದರೂ, ಹುಡುಕಾಟದ ಪ್ರಯತ್ನಗಳು ನಾವು ಬಯಸಿದಷ್ಟು ವೇಗವಾಗಿಲ್ಲ ಎಂಬುದು ವಾಸ್ತವವಾಗಿದೆ” ಎಂದರು.
ಮೇ 14 ರಂದು ನಡೆಯಲಿರುವ ಮತದಾನದಲ್ಲಿ ಎರ್ಡೊಗನ್ ಮರುಚುನಾವಣೆಗೆ ನಿಂತಿದ್ದಾರೆ ಮತ್ತು ವಿರೋಧ ಪಕ್ಷಗಳು ಅವರ ಮೇಲೆ ದಾಳಿ ಮಾಡಲು ಭೂಕಂಪವನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದಾರೆ.
ಚಳಿಗಾಲದ ಪರಿಸ್ಥಿತಿಗಳಲ್ಲಿ ನೂರಾರು ಸಾವಿರ ಜನರು ನಿರಾಶ್ರಿತರಾಗಿದ್ದಾರೆ ಮತ್ತು ಆಹಾರದ ಕೊರತೆ ಎದುರಿಸುತ್ತಿದ್ದಾರೆ. ಬದುಕುಳಿದವರನ್ನು ಹುಡುಕಲು ಸಾವಿರಾರು ಧ್ವಂಸಗೊಂಡ ಕಟ್ಟಡಗಳ ಅವಶೇಷಗಳಲ್ಲಿ ರಾತ್ರಿ-ಹಗಲೆನ್ನದೆ ರಕ್ಷಣಾ ತಂಡಗಳು ಶ್ರಮಿಸುತ್ತಿವೆ. ಟರ್ಕಿ ಮತ್ತು ಸಿರಿಯಾದಾದ್ಯಂತ ಕನಿಷ್ಠ 870,000 ಜನರಿಗೆ ಬಿಸಿ ಊಟದ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.