ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಟಿ, ಮಾಡೆಲ್ ತ್ವಿಶಾ ಶರ್ಮಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ನಿವೃತ್ತ ಜಿಲ್ಲಾ ನ್ಯಾಯಾಧೀಶೆ, ತ್ವಿಶಾ ಅತ್ತೆ ಗಿರಿಬಾಲಾ ಸಿಂಗ್ ಅವರನ್ನು ಸಿಬಿಐ ಬಂಧಿಸಿದೆ.
ಇದಕ್ಕೂ ಮುನ್ನ, ಭೋಪಾಲ್ನ 10ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಹೈಕೋರ್ಟ್ ಸಂಪೂರ್ಣವಾಗಿ ರದ್ದುಗೊಳಿಸಿದ್ದು, ಈ ಬೆನ್ನಲ್ಲೇ ಸಿಬಿಐ ಈ ಕಠಿಣ ಕ್ರಮ ಕೈಗೊಂಡಿದೆ.
ಜಾಮೀನು ನಿರಾಕರಿಸಿದ ಹೈಕೋರ್ಟ್
ಈ ಪ್ರಕರಣದಲ್ಲಿ ತ್ವಿಶಾ ಶರ್ಮಾ ಅವರ ದೇಹದ ಮೇಲೆ ಗಾಯಗಳಾಗಿದ್ದು, ಗಂಭೀರ ಅಪಾಯವನ್ನು ಸೂಚಿಸಿವೆ. ತ್ವಿಶಾ ಅವರಿಗೆ ಆರೋಪಿಯು ಕಿರುಕುಳ ನೀಡುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುವ ಬಲವಾದ ಸಾಕ್ಷ್ಯಗಳು ಮತ್ತು ವಾಟ್ಸಾಪ್ ಚಾಟ್ಗಳು ಲಭ್ಯವಿದ್ದರೂ, ಗಿರಿಬಾಲಾ ತನಿಖೆಗೆ ಸಂಪೂರ್ಣ ಅಸಹಕಾರ ತೋರಿದ್ದರಿಂದ ಅವರ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ತಿರಸ್ಕರಿಸಿತ್ತು.
ಪತಿ ಕೋರ್ಟ್ಗೆ ಶರಣು
ಸತತ 10 ದಿನಗಳ ಕಾಲ ಪೊಲೀಸರು ಮತ್ತು ಸಿಬಿಐ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಮೃತ ತ್ವಿಶಾ ಶರ್ಮಾ ಅವರ ಪತಿ ಸಮರ್ಥ್ ಸಿಂಗ್ ಕಳೆದ ವಾರವಷ್ಟೇ ತನಿಖಾ ಸಂಸ್ಥೆಗಳ ಬಿಗಿ ಕಾರ್ಯಾಚರಣೆ ಮತ್ತು ಬಂಧನದ ಭೀತಿಯಿಂದ ಕೋರ್ಟ್ಗೆ ಶರಣಾಗಿದ್ದರು.



