ಹೊಸದಿಗಂತ ಡಿಜಿಟಲ್ ಡೆಸ್ಕ್;
ಬಾಲಿವುಡ್ ಸೆಲೆಬ್ರಿಟಿಗಳ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಸಾವಿನ ಪ್ರಕರಣವೀಗ 5 ವರ್ಷಗಳಬಳಿಕ ಮತ್ತೆ ಮುನ್ನಲೆಗೆ ಬಂದಿದೆ. ಇದರಲ್ಲಿ ಶಿವಸೇನೆಯ ಶಾಸಕ ಆದಿತ್ಯ ಠಾಕ್ರೆ ಹೆಸರು ಕೇಳಿ ಬರುತ್ತಿದೆ.
ಇದೀಗ ಸಾವಿನ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದ್ದು, ದಿಶಾ ಸಾಲಿಯಾನ್ ಅವರ ತಂದೆ ಸತೀಶ್ ಸಾಲಿಯಾನ್ ಅವರು ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ದಿಶಾ ಸಾಲಿಯಾನ್ ಓರ್ವ ಸೆಲೆಬ್ರಿಟಿ ಮ್ಯಾನೇಜರ್ ಆಗಿದ್ದರು. ಜೂನ್ 8 , 2020 ರಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಅವರ ಸಾವು ಆತ್ಮಹತ್ಯೆಯೋ ಕೊಲೆಯೋ ಎಂಬುದು ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿ ಉಳಿದಿದೆ.
ದಿಶಾ ಸಾಲಿಯನ್ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ಆಗಿದ್ದರು. ಅವರಿಬ್ಬರಿಗೆ ಗೆಳೆತನಕ್ಕೂ ಮೀರಿದ ಸಂಬಂಧವಿತ್ತು ಎಂಬ ಆರೋಪ ಇತ್ತು. ಆದರೆ ಕೊರೋನಾ ಸಮಯದಲ್ಲಿ ಅವರ ಭಾವೀ ಪತಿ ರೋಹನ್ ರೈ ಜೊತೆಗೆ ದಿಶಾ ಇದ್ದರು. ಜೂನ್ 8ರಂದು ದಿಶಾ ತನ್ನ ಫಿಯಾನ್ಸಿ ಹಾಗೂ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದಳು. ಸಾಯುವ ದಿನ ಮುಂಬೈನ ಮಲಾಡ್ ಪ್ರದೇಶದಲ್ಲಿರುವ ತಮ್ಮದೇ ಅಪಾರ್ಟ್ಮೆಂಟ್ನ 14ನೇ ಅಂತಸ್ತಿನಲ್ಲಿ ಪಾರ್ಟಿಯಲ್ಲಿದ್ದ ದಿಶಾ ಸಾಲಿಯಾನ್ ಅಲ್ಲಿಂದ ಬಿದ್ದು ಸಾವು ಕಂಡಿದ್ದರು.
2023 ರಲ್ಲಿ, ಮುಂಬೈ ಪೊಲೀಸ್ ದಿಶಾ ಸಾಲಿಯಾನ್ ಸಾವಿನ ತನಿಖೆಗೋಸ್ಕರ ಮೂರು ಜನರಿರೋ ಒಂದು ಸ್ಪೆಷಲ್ ತನಿಖಾ ತಂಡ (ಎಸ್ಐಟಿ) ಮಾಡಿತು. ಮುಂಬೈ ಪೊಲೀಸ್ ಈ ಕೇಸ್ನಲ್ಲಿ ಆಕಸ್ಮಿಕ ಸಾವು ಅಂತ ಕೇಸ್ ದಾಖಲು ಮಾಡಿತ್ತು.
ಇತ್ತ ದಿಶಾ ಸಾಲಿಯನ್ ಅವರ ತಂದೆ ಸತೀಶ್ ಸಾಲಿಯನ್ ಬುಧವಾರ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಮಗಳ ಸಾವಿನ ಬಗ್ಗೆ ಮರುತನಿಖೆ ಆಗಬೇಕೆಂದು ಒತ್ತಾಯಿಸಿದ್ದಾರೆ.
ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ವಿರುದ್ಧ ಎಫ್ಐಆರ್ ದಾಖಲಿಸಲು ಮತ್ತು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ದೇಶಿಸುವಂತೆ ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಯುಬಿಟಿ ಶಿವಸೇನೆ ಶಾಸಕ ಆದಿತ್ಯ ಠಾಕ್ರೆ, ಮಾಜಿ ಮೇಯರ್ ಕಿಶೋರಿ ಪೆಡ್ನೇಕರ್ ಮತ್ತು ಇತರರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದಿತ್ಯ ಠಾಕ್ರೆ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 376 (ಡಿ), 302, 201, 218, 409, 166, 107, 109, 120 (ಬಿ) ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಮತ್ತು ಈ ಪ್ರಕರಣವನ್ನು ಸಿಬಿಐಗೆ ನೀಡಬೇಕೆಂದು ಸತೀಶ್ ಸಾಲಿಯನ್ ನ್ಯಾಯಾಲಯವನ್ನು ಮನವಿ ಮಾಡಿಕೊಂಡಿದ್ದಾರೆ.
ಇದು ಬಿಜೆಪಿ ಪ್ಲಾನ್ ಎಂದ ಯುಬಿಟಿ
ಶಿವಸೇನೆ (ಯುಬಿಟಿ) ಲೀಡರ್ ಅಂಬಾದಾಸ್ ದಾನ್ವೆ ಬುಧವಾರ ಬಿಜೆಪಿಯವರು ದಿಶಾ ಸಾಲಿಯಾನ್ ಸಾವಿನ ಕೇಸ್ನಲ್ಲಿ ಆದಿತ್ಯ ಠಾಕ್ರೆ ಹೆಸರು ಮುನ್ನಲೆಗೆ ತಂದು ‘ಕೆಟ್ಟ ಹೆಸರು ತರಲು ಪ್ಲಾನ್’ ಮಾಡ್ತಿದ್ದಾರೆ ಅಂತ ಆರೋಪಿಸಿದ್ದಾರೆ.ಅವರು (ದಿಶಾ ತಂದೆ) ಏನು ಹೇಳಿದ್ದಾರೆ ಅಂತ ನಮಗೆ ಗೊತ್ತಿಲ್ಲ, ಆದ್ರೆ ಆದಿತ್ಯ ಠಾಕ್ರೆ ಒಬ್ಬ ಅನುಭವಿ ಲೀಡರ್, ಯುವ ಲೀಡರ್. ಭಾರತೀಯ ಜನತಾ ಪಾರ್ಟಿ ಅವರ ಮೇಲೆ ಪ್ರೆಷರ್ ಹಾಕಿ ಅವರಿಗೆ ಕೆಟ್ಟ ಹೆಸರು ತರಲು ಪ್ಲಾನ್ ಮಾಡ್ತಿದೆ. ನಾವು ಈ ಪ್ಲಾನ್ಗೆ ಉತ್ತರ ಕೊಡೋ ಅವಶ್ಯಕತೆ ಇಲ್ಲ. ಕೋರ್ಟ್ ಉತ್ತರ ಕೊಡುತ್ತೆ ಎಂದು ಹೇಳಿದ್ದಾರೆ.