ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯ ಕಿತ್ತೂರು ಬಳಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರಯಾಣಿಸುತ್ತಿದ್ದ ವಾಹನ ಭೀಕರ ಅಪಘಾತಕ್ಕೀಡಾದ ಘಟನೆ ನಡೆದಿದ್ದು, ಇದರಿಂದ ಲಕ್ಷ್ಮಿ ಳ್ಕರ್ ಅವರ ಬೆನ್ನಿಗೆ ಗಂಭೀರವಾದ ಗಾಯವಾಗಿದ್ದು, ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರ ಮುಖ, ತಲೆಗೆ ಗಾಯವಾಗಿದೆ.
ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಇವರನ್ನು ಡಿಸ್ಚಾರ್ಜ್ ಮಾಡುವುದಾಗಿ ವೈದ್ಯರು ಹೇಳಿದ್ದಾರೆ.
ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಮೂರು ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆಸ್ಪತ್ರೆಗೆ ಬಂದಾಗ ಬಹಳ ಪೆಟ್ಟಾಗಿತ್ತು. 24 ಗಂಟೆಯಲ್ಲಿ ಅವರ ಆರೋಗ್ಯದಲ್ಲಿ ಚೇತರಿಕೆ ಆಗಿದೆ. ಸಚಿವರಿಗೆ ಬೆನ್ನುಹುರಿ ಪೆಟ್ಟಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯರಾಗಿರುವ ಡಾ.ರವಿ ಪಾಟೀಲ್ ಹೇಳಿದ್ದಾರೆ.
ಇದರ ನಡುವೆಯೇ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಅಪಘಾತಕ್ಕೆ ಸಂಭವಿಸಿದಂತೆ, ಹಲವಾರು ರೀತಿಯ ಊಹಾಪೋಹಗಳು ಬಂದಿವೆ. ಇಲ್ಲಿಯವರೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ನಾಯಿಯೊಂದು ಅಡ್ಡ ಬಂದಿದ್ದು, ಅದನ್ನು ತಪ್ಪಿಸುವ ಭರದಲ್ಲಿ, ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಕಾರು ನುಜ್ಜುಗುಜ್ಜಾಗಿದೆ ಎಂದೇ ಹೇಳಲಾಗಿತ್ತು. ಆದರೆ ಕಾರಿನ ಅಪಘಾತಕ್ಕೆ ನಾಯಿ ಕಾರಣವಲ್ಲ ಎನ್ನುವ ವಿಷಯವನ್ನು ಇದೀಗ ಕಾರನ್ನು ಚಾಲನೆ ಮಾಡುತ್ತಿರುವ ಚಾಲಕ ಶಿವಪ್ರಸಾದ್ ಪೊಲೀಸರಿಗೆ ತಿಳಿಸಿದ್ದಾರೆ.
ಬದಲಿಗೆ ಕಾರಿನ ಎಡಭಾಗದಿಂದ ಕಂಟೇನರ್ ಟ್ರಕ್ ವೇಗಾಗಿ ಬಂದಿತ್ತು. ಕಾರಿಗೆ ಟ್ರಕ್ ತಾಗುತ್ತಿದ್ದುದರಿಂದ ಅಪಘಾತ ತಪ್ಪಿಸಲು ಎಡಕ್ಕೆ ತೆಗೆದುಕೊಂಡಿದ್ದರಿಂದ ಕಾರು ಸರ್ವೀಸ್ ರಸ್ತೆ ಬದಿ ಇರುವ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ಶಿವಪ್ರಸಾದ್ ಪೊಲೀಸರಲ್ಲಿ ದೂರಿದ್ದು, ಈ ಕುರಿತು ಎಫ್ಐಆರ್ ದಾಖಲು ಮಾಡಲಾಗಿದೆ.
ಅದೇ ಇನ್ನೊಂದೆಡೆ, ಈ ಬಗ್ಗೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರೂ ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ಕಂಟೇನರ್ ಟ್ರಕ್ ಪಾತ್ರವಿದೆ. ಕಂಟೇನರ್ ಟ್ರಕ್ ಪತ್ತೆಗೆ ಕೆಲಸ ಮಾಡಲಾಗುತ್ತಿದೆ. ಇದು ಹಿಟ್ ಆ್ಯಂಡ್ ರನ್ ಪ್ರಕರಣ ಎಂದು ಮೇಲ್ನೋಟಕ್ಕೆ ತೋರುತ್ತಿದೆ. ಅಕ್ಸಿಡೆಂಟ್ ಆದ ಬಳಿಕ, ಕಂಟೇನರ್ ಟ್ರಕ್ ಚಾಲಕ ನಿಂತು ಪರಾರಿಯಾಗಿದ್ದಾನೆ. ಈ ಸಮಯದಲ್ಲಿ ಸಚಿವರ ಬೆಂಗಾವಲು ಪಡೆ ಕೂಡ ಇರಲಿಲ್ಲ ಎಂದಿದ್ದಾರೆ. ಎಲ್ಲಾ ನಿಟ್ಟಿನಲ್ಲಿಯೂ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇಬ್ಬರು ನಾಯಕಾರು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಗಿಸಿ ರಸ್ತೆ ಮಾರ್ಗವಾಗಿ ಬೆಳಗಾವಿಯತ್ತ ಬರುತ್ತಿದ್ದರು. ಒಂದೇ ವಾಹನದಲ್ಲಿ ಸಚಿವೆ ಹೆಬ್ಬಾಳ್ಕರ್, ಸಹೋದರ ಚನ್ನರಾಜ್ ಹಟ್ಟಿಹೊಳಿ ಅವರು ಬರುತ್ತಿದ್ದರು. ಆ ಸಮಯದಲ್ಲಿ ಅಪಘಾತ ಸಂಭವಿಸಿದೆ. ನಾಯಿಯೊಂದು ಕಾರಿಗೆ ದಿಢೀರ್ ಅಡ್ಡಲಾಗಿ ಬಂದಿದೆ. ಅದನ್ನು ತಪ್ಪಿಸಲು ಹೋಗಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ಮೊದಲು ಉಹಿಸಲಾಗಿತ್ತು.