ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ಯಾಂಗ್ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವನ್ನಪ್ಪಿಲ್ಲ, ಅವರಿಗೆ ವಿಷಪ್ರಾಶನ ನಡೆಸಿ ಹೃದಯಘಾತವಾಗುವಂತೆ ಮಾಡಲಾಗಿದೆ ಎಮದು ಪುತ್ರ ಉಮರ್ ಅನ್ಸಾರಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ತಂದೆ ಮೃತಪಟ್ಟ ಬಗ್ಗೆ ಅಧಿಕಾರಿಗಳ ಕಡೆಯಿಂದ ನನಗೆ ಯಾವುದೇ ಮಾಹಿತಿ ಬಂದಿಲ್ಲ. ವಿಷಯ ಮಾಧ್ಯಮಗಳ ಮೂಲಕ ತಿಳಿಯಿತು. ಎರಡು ದಿನಗಳ ಹಿಂದೆಯಷ್ಟೇ ನಾನು ಅವರನ್ನು ಭೇಟಿಯಾಗಲು ಬಂದಿದ್ದೆ. ಆದರೆ. ಅವಕಾಶ ನೀಡಲಿಲ್ಲ. ಮಾ.19 ರಂದು ರಾತ್ರಿ ಸೇವಿಸಿದ ಊಟದಲ್ಲಿ ವಿಷ ಸೇರಿದೆ. ನಾವು ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗುತ್ತೇವೆ ಎಂದಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಡಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. ಪರೀಕ್ಷೆ ಬಳಿಕ ನಮಗೆ ಹಸ್ತಾಂತರ ಮಾಡುತ್ತಾರೆ. ನಂತರ ನಾವು ಅಂತ್ಯಸಂಸ್ಕಾರ ನೆರವೇರಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಅನ್ಸಾರಿ ಸಹೋದರ, ಘಾಜಿಪುರ ಸಂಸದ ಅಫ್ಜಲ್ ಅನ್ಸಾರಿ ಮಂಗಳವಾರ ಅಧಿಕಾರಿಗಳು ಅವರನ್ನು ಜೈಲಿನಲ್ಲಿ ಸ್ಲೋ ಪಾಯ್ಸನಿಂಗ್ಗೆ ಒಳಪಡಿಸಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ ಬಾಂದಾ ಜೈಲಿನಲ್ಲಿ ಮುಖ್ತಾರ್ ಅನ್ಸಾರಿಗೆ ಜೀವ ಬೆದರಿಕೆ ಇದೆ. ಅವರಿಗೆ ಆಹಾರದಲ್ಲಿ ವಿಷ ಪದಾರ್ಥ ಬೆರೆಸಿ ನೀಡಲಾಗಿದೆ ಎಂದು ಅವರ ವಕೀಲರು ಕೂಡಾ ಈ ತಿಂಗಳ ಆರಂಭದಲ್ಲಿ ಕೋರ್ಟ್ನಲ್ಲಿ ಹೇಳಿದ್ದರು. ಆದರೆ ಈ ಆರೋಪವನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.
ಇನ್ನು ಅನ್ಸಾರಿ ಕುಟುಂಬದವರ ಆರೋಪದ ಕುರಿತು ತನಿಖೆ ನಡೆಸುವಂತೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.