ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ವೃದ್ಧ ದಂಪತಿ ಮೃತಪಟ್ಟಿದ್ದಾರೆ. ಅನಾರೋಗ್ಯದ ಕಾರಣ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಹೇಳಲಾಗಿತ್ತು. ಆದರೆ ಈ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.
ಸಂಪಿಗೆಹಳ್ಳಿಯ ನಿವಾಸದಲ್ಲಿ ಸುಮಿತ್ರಾ ಪ್ರಸಾದ್ (77) ಹಾಗೂ ಶಿವಾನಂದಂ ಪ್ರಸಾದ್ (83) ಮೃತದೇಹ ಪತ್ತೆಯಾಗಿತ್ತು. ಇದೀಗ ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದಿದ್ದು, ಭಾವುಕ ಸತ್ಯವೊಂದು ಹೊರಬಿದ್ದಿದೆ.
ಪತ್ನಿ ಸುಮಿತ್ರಾಗೆ ಕಣ್ಣು ಕಾಣಿಸುತ್ತಿರಲಿಲ್ಲ. ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದ್ದಕ್ಕಿದ್ದಂತೆಯೇ ಅವರಿಗೆ ತೀವ್ರ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಪತ್ನಿಯ ಸಾವಿನ ನೋವಿನಿಂದ ಶಿವಾನಂದಂ ಪ್ರಸಾದ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ವೈದ್ಯಕೀಯ ವರದಿಯಲ್ಲಿ ಈ ವಿಷಯ ಹೊರಬಂದಿದ್ದು, ಪತಿ ಪತ್ನಿಯ ಭಾವುಕ ಸಂಬಂಧದ ಪವಿತ್ರತೆ ಎದ್ದುಕಾಣುತ್ತದೆ. ಈ ದಂಪತಿಯ ಪುತ್ರನೇ ತಪ್ಪು ತಿಳಿದುಕೊಂಡು ಪೊಲೀಸರಿಗೆ ದೂರು ನೀಡಿದ್ದರು. ಅಮ್ಮನನ್ನು ಕೊಂದು ಅಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿದ್ದರು. ಆದರೆ ತನಿಖೆ ವೇಳೆ ಸತ್ಯಾಸತ್ಯತೆ ಅರ್ಥವಾಗಿದೆ. ಸುಮಿತ್ರಾ ಮೈಮೇಲೆ ಒಂದು ಸಣ್ಣ ಗಾಯವೂ ಇರಲಿಲ್ಲ. ತೀವ್ರ ಹೃದಯಾಘಾತದಿಂದಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಖಚಿತಪಡಿಸಿದ್ದಾರೆ.



