ಹೊಸದಿಗಂತ ವರದಿ, ಯಲ್ಲಾಪುರ:
ಪಟ್ಟಣದ ಚವಾಣ್ ಕಾಂಪ್ಲೆಕ್ಸ್ ನಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಶಾಖೆಯಲ್ಲಿ 2,69,95000 ರೂ ಗಳನ್ನು ವಂಚಿಸಿ ಕಳೆದ ವಾರ ಪರಾರಿಯಾಗಿದ್ದ ಅಸಿಸ್ಟೆಂಟ್ ಮ್ಯಾನೇಜರ್ ಕುಮಾರ ಕೃಷ್ಣ ಮೂರ್ತಿ ಬೋನಾಲ ಹಾಗೂ ಅವನ ಪತ್ನಿ ರೇವತಿ ಪ್ರಿಯಾಂಕ ಗೊರ್ರೆ ಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಸೋಮವಾರ ಸಂಜೆ ಯಲ್ಲಾಪುರ ಪೊಲೀಸ್ ಠಾಣೆ ಯಲ್ಲಿ ಹೆಚ್ಚುವರಿ ಎಸ್ ಪಿ ಬದರಿನಾಥ್,ಸಿಪಿ ಐ ಸುರೇಶ ಯಳ್ಳೂರ್, ಆರೋಪಿತರೊಂದಿಗೆ ವಿಚಾರಣೆ ಕೈಗೊಂಡಿದ್ದರು ಎಂದು ತಿಳಿದು ಬಂದಿದೆ.
ಬ್ಯಾಂಕಿಗೆ ಮಂಕು ಬೂದಿ ಎರಚಿರುವ ಕುರಿತು ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.
ಆಂಧ್ರಪ್ರದೇಶ ದ ಅನಂತ ಪುರ ಜಿಲ್ಲೆಯ ಸಿಂಡಿಕೆಟ್ ನಗರ ನಿವಾಸಿ ಕುಮಾರ ಕೃಷ್ಣ ಮೂರ್ತಿ ಬೋನಾಲ ಹಣ ಲಪಟಾಯಿಸಿ ಬ್ಯಾಂಕಿಗೆ . ದ್ರೋಹ ಬಗೆದ ವ್ಯಕ್ತಿ ಯಾಗಿದ್ದಾನೆ.
ಈತ 2022 ರ ಏಪ್ರಿಲ್ ನಿಂದ ಸೆ. 5 ರ ನಡುವಿನ ಅವಧಿಯಲ್ಲಿ ಬ್ಯಾಂಕ್ ಆಫ್ ಬರೋಡಾ ಶಾಖೆಯು ಎಸ್ ಬಿಐನಲ್ಲಿ ಹೊಂದಿರುವ ಕರೆಂಟ್ ಅಕೌಂಟ್ ಖಾತೆಯ ಮೂಲಕ 2,69,95000 ರೂ.ಗಳನ್ನು ತನ್ನ ಪತ್ನಿ ರೇವತಿ ಪ್ರಿಯಾಂಕ ಗೊರ್ರೆ ಯ ಆಂಧ್ರ ಪ್ರದೇಶದ ಚಿರಲಾದ ಎಸ್ ಬಿ ಆಯ್ ಬ್ಯಾಂಕ್ ನಲ್ಲಿ ಹೊಂದಿರುವ ಖಾತೆ ಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದ ಎಂದು ತಿಳಿದುಬಂದಿದೆ .
ಹೀಗೆ ಹಣ ವರ್ಗಾವಣೆ ಮಾಡಲು ಈತ ಯಲ್ಲಾಪುರ ಬ್ಯಾಂಕ್ ಆಫ್ ಬರೋಡಾದ ಸಿಬ್ಬಂದಿಯಾದ ಸಂಜೀವ ಭಟ್ ಮತ್ತು ನಾಗೇಂದ್ರ ಎಂಬುವವರ ಲಾಗ್ ಇನ್ ಅನ್ನು ಅವರ ಗಮನಕ್ಕೆ ಬರದಂತೆ ಬಳಸಿಕೊಂಡಿದ್ದ. ಈ ಕುರಿತು ಬ್ಯಾಂಕ ಆಫ್ ಬರೋಡಾದ ಯಲ್ಲಾಪುರ ಶಾಖೆಯ ವ್ಯವಸ್ಥಾಪಕ ವಿಘ್ನಣೆಶ್ವರ್ ಭಟ್ ಯಲ್ಲಾಪುರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.