ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾನನಷ್ಟ ಪ್ರಕರಣದಲ್ಲಿ ಗುಜರಾತ್ನ ಸೂರತ್ ನ್ಯಾಯಾಲಯ ರಾಹುಲ್ಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ರಾಹುಲ್ ಗಾಂಧಿಯನ್ನು ಸಂಸದರ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಖಾರವಾಗಿ ಪ್ರತಿಕ್ರಿಯಿಸಿದ್ದು, ಮಾಧ್ಯಮಗಳೊಂದಿಗೆ ಮಾತನಾಡುತ್ತಾ.. ಬೆದರಿಕೆಗಳು, ಜೈಲು ಶಿಕ್ಷೆಗೆ ನಾನು ಹೆದರುವುದಿಲ್ಲ ಹಾಗೆಯೇ ಪ್ರಶ್ನಿಸುವುದನ್ನು ಕೂಡ ನಿಲ್ಲಿಸುವುದಿಲ್ಲ. ಎಂದಿಗೂ ಕ್ಷಮೆ ಕೇಳುವುದಿಲ್ಲ, ಯಾಕೆಂದರೆ ನಾನು ಸಾವರ್ಕರ್ ಅಲ್ಲ.. ನನ್ನ ಹೆಸರು ಗಾಂಧಿ. ಗಾಂಧಿ ಯಾರ ಬಳಿಯೂ ಕ್ಷಮೆ ಕೇಳಲ್ಲ ಎಂದು ರಾಹುಲ್ ವ್ಯಂಗ್ಯವಾಗಿ ಮಾತನಾಡಿದರು.
ರಾಹುಲ್ ‘ಸಾವರ್ಕರ್’ ವಿರುದ್ಧ ಮಾಡಿದ ಕಾಮೆಂಟ್ಗಳಿಗೆ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ವಿನಾಯಕ ಸಾವರ್ಕರ್ ಅವರನ್ನು ಅವಮಾನಿಸಬೇಡಿ ಎಂದು ರಾಹುಲ್ ಗಾಂಧಿಗೆ ಎಚ್ಚರಿಸಿದ್ದಾರೆ. ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರ್ಕರ್ ಅವರನ್ನು ತಮ್ಮ ಆರಾಧ್ಯ ದೈವವೆಂದು ಪರಿಗಣಿಸಿದ್ದು, ಅವಮಾನ ಮಾಡುವುದನ್ನು ನಿಲ್ಲಿಸಿ ಎಂದು ಉದ್ಧವ್ ಠಾಕ್ರೆ ರಾಹುಲ್ಗೆ ಸಲಹೆ ನೀಡಿದ್ದಾರೆ. ಮೇಲಾಗಿ ಸಾವರ್ಕರ್ ಅವರನ್ನು ಪದೇ ಪದೇ ಅವಹೇಳನ ಮಾಡುವ ಮೂಲಕ ವಿಪಕ್ಷಗಳ ಮೈತ್ರಿಯಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಬಿಜೆಪಿಗೆ ಬಲ ಬರಲಿದೆ ಎಂಬ ಸೂಚನೆ ನೀಡಿದರು.
ಸಾವರ್ಕರ್ ಅವರು 14 ವರ್ಷಗಳ ಕಾಲ ಅಂಡಮಾನ್ ಸೆಲ್ಯುಲಾರ್ ಜೈಲಿನಲ್ಲಿ ಊಹಿಸಲಾಗದ ಚಿತ್ರಹಿಂಸೆಗೆ ಒಳಗಾಗಿದ್ದರು. ನಾವು ನೋವನ್ನು ಆ ಮಾತ್ರ ಓದಬಹುದು. ಇದು ತ್ಯಾಗದ ಒಂದು ರೂಪ. ಸಾವರ್ಕರ್ ಅವರನ್ನು ಅವಮಾನಿಸಿದರೆ ನಾವು ಸಹಿಸಿಕೊಳ್ಳುವುದಿಲ್ಲ ಎಂದು ಉದ್ದವ್ ಹೇಳಿದ್ದಾರೆ. ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮುಸ್ಲಿಂ ಬಹುಸಂಖ್ಯಾತ ಪಟ್ಟಣವಾದ ಮಾಲೆಗಾಂವ್ನಲ್ಲಿ ಭಾನುವಾರ ನಡೆದ ರ್ಯಾಲಿಯಲ್ಲಿ ಠಾಕ್ರೆ ಈ ಮಾತುಗಳನ್ನಾಡಿದ್ದಾರೆ.