ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯಲ್ಲಿದ್ದ ನಾಲ್ಕು ವರ್ಷದ ಬಾಲಕಿಯನ್ನು ಚಿರತೆ ಎಳೆದೊಯ್ದ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಉಧಂಪುರ ನಿಯಂತ್ರಣ ಕೊಠಡಿ ತಕ್ಷಣವೇ ಒಂದು ತಂಡವನ್ನು ಫೀಲ್ಡಿಗಿಳಿಸಿದ್ದು, ಸರ್ಚ್ ಆಪರೇಷನ್ ಪ್ರಾರಂಭಿಸಿದ್ದಾರೆ.
ಉಧಂಪುರದ ಅಪ್ಪರ್ ಪಂಚ್ರಿ ತಹಸಿಲ್ನ ಬಂಜ್ಲಾ ಗ್ರಾಮದಲ್ಲಿ ಶನಿವಾರ ರಾತ್ರಿ 7 ರಿಂದ 8 ಗಂಟೆಯ ನಡುವೆ ಈ ಘಟನೆ ನಡೆದಿದೆ. ಇದಾದ ಬಳಿಕ ತಂಡ ಮಗುವಿನ ಹುಡುಕಾಟ ಆರಂಭಿಸಿದ್ದು, ಎರಡು ಕಿಮೀ ದೂರದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ನಮಗೆ ಮಾಹಿತಿ ಬಂದ ಕೂಡಲೇ ಉಧಂಪುರ ನಿಯಂತ್ರಣ ಕೊಠಡಿಯಿಂದ ತಂಡವನ್ನು ಕಳುಹಿಸಿದ್ದೇವೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ತಡೆಯಲು ಇಲ್ಲಿಗೆ ಬಂದಿರುವುದಾಗಿ ಜಮ್ಮು ಕಾಶ್ಮೀರ ವನ್ಯಜೀವಿ ವಿಭಾಗದ ರೇಂಜ್ ಆಫೀಸರ್ ರಾಕೇಶ್ ಶರ್ಮಾ ತಿಳಿಸಿದ್ದಾರೆ.
ಇದೊಂದು ಅತ್ಯಂತ ದುರದೃಷ್ಟಕರ ಘಟನೆ ಎಂದ ಅವರು, ಸಂತ್ರಸ್ತರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಲು ಪ್ರಯತ್ನಿಸುತ್ತೇವೆ. ಜಾಗೃತಿ ಅಭಿಯಾನದ ಅಂಗವಾಗಿ, ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಒಬ್ಬಂಟಿಯಾಗಿ ಹೋಗಲು ಬಿಡಬೇಡಿ ಎಂದು ಜನರಿಗೆ ತಿಳಿಸಲಾಗಿದೆ ಎಂದರು.
ಚಿರತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಶೀಘ್ರದಲ್ಲೇ ಹಿಡಿಯುತ್ತೇವೆ ಎಂದು ಹೇಳಿದರು. ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಸಿಗುವಂತೆ ನೋಡಿಕೊಳ್ಳುತ್ತೇವೆ. ವನ್ಯಜೀವಿಗಳ ಬಗ್ಗೆ ಎಚ್ಚರದಿಂದಿರುವಂತೆ ಕಾಲಕಾಲಕ್ಕೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.