ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಲ ದೇಗುಲದ ಗರ್ಭಗುಡಿಯಲ್ಲಿ ಹೋಲಿ ದಿನ ನಡೆದ ಬೆಂಕಿ ದುರಂತದಲ್ಲಿ ಗಾಯಗೊಂಡಿದ್ದ ಅರ್ಚಕರು ಇಂದು ಮುಂಬೈನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಹೋಳಿಯಂದು ದೇಗುಲದ ಗರ್ಭಗುಡಿಯ ಒಳಗೆ ಸಂಭವಿಸಿದ ಬೆಂಕಿ ದುರಂತದಲ್ಲಿ ಅರ್ಚಕರು ಸೇರಿದಂತೆ 14 ಜನ ಗಾಯಗೊಂಡಿದ್ದರು. ಆದರೆ ಗಾಯಗೊಂಡವರಲ್ಲಿ ಒಬ್ಬರಾದ ಅರ್ಚಕ 79 ವರ್ಷದ ಸತ್ಯನಾರಾಯಣ ಸೋನಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಸತ್ಯನಾರಾಯಣ ಸೋನಿ ಅವರು ಶ್ರೀ ಮಹಾಕಾಲೇಶ್ವರ ಮ್ಯಾನೇಜ್ಮೆಂಟ್ನಲ್ಲಿ ಸಪೋರ್ಟಿಂಗ್ ಸ್ಟಾಪ್( ಸಹಾಯಕ ಅರ್ಚಕ) ಆಗಿ ಕೆಲಸ ಮಾಡುತ್ತಿದ್ದರು. ಹೋಲಿ ದಿನದಂದು ನಸುಕಿನ ಜಾವದಲ್ಲಿ ದೇವರಿಗೆ ಭಸ್ಮಾರತಿ ವೇಳೆ ಬಣ್ಣ ಎರಚುವಾಗ ಆ ಬಣ್ಣಕ್ಕೆ ಬೆಂಕಿ ತಗುಲಿ ಗರ್ಭಗುಡಿಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಒಟ್ಟು 14 ಜನ ಈ ಅವಘಡದಲ್ಲಿ ಗಾಯಗೊಂಡಿದ್ದರು. ಸೋನಿ ಅವರಿಗೆ 25 ರಿಂದ 30 ರಷ್ಟು ಸುಟ್ಟಗಾಯಗಳಾಗಿತ್ತು. ಅವರನ್ನು ಆರಂಭದಲ್ಲಿ ಇಂದೋರ್ನ ಅರಬಿಂದೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಸಕ್ಕರೆ ಕಾಯಿಲೆಯೂ ಇದಿದ್ದರಿಂದ ಗುಣಮುಖರಾಗಲು ವಿಳಂಬವಾಗುತ್ತಿದೆ. ಉಳಿದ ಗಾಯಾಳುಗಳ ಆರೋಗ್ಯ ಸ್ಥಿರವಾಗಿದೆ ಎಂದು ಕಲೆಕ್ಟರ್ ನೀರಜ್ ಕುಮಾರ್ ಸಿಂಗ್ ಹೇಳಿದ್ದರು.
ಗಾಯಾಳುಗಳಲ್ಲಿ ಮೂವರಿಗೆ ಇಂದೋರ್ನ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಮುಂದುವರೆದಿದೆ. ಉಳಿದ 10 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗರ್ಭಗುಡಿಯಲ್ಲಿ ನಡೆದ ಈ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ತನಿಖೆಯ ನೇತೃತ್ವ ವಹಿಸಿದ್ದ ಅಧಿಕಾರಿಗಳು ಪ್ರಾಥಮಿಕ ವರದಿ ಸಲ್ಲಿಕೆ ಮಾಡಿದ್ದು, ಗುಲಾಲ್ನಲ್ಲಿದ್ದ ಹೊತ್ತು ಉರಿಯುವಂತಹ ಕೆಮಿಕಲ್ ಘಟನೆಗೆ ಕಾರಣವಾಗಿದೆ ಎಂದು ವರದಿ ನೀಡಿದ್ದಾರೆ.
ಸೋನಿ ಅವರ ನಿಧನಕ್ಕೆ ಉಜ್ಜಿಯಿನಿಯವರೇ ಆಗಿರುವ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.