ಹೊಸದಿಗಂತ ಡಿಜಿಟಲ್ ಡೆಸ್ಕ್:
ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದ ಅಮರಾವತಿ ಮೂಲದ ಉಮೇಶ್ ಕೊಲ್ಹೆ ಹತ್ಯೆಯಾಗಿತ್ತು. ಸದ್ಯ ಪ್ರಕರಣದ ಎಲ್ಲ ಆರೋಪಿಗಳು ಆರ್ಥರ್ ರೋಡ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಇದೀಗ ಆರೋಪಿ ಶಾರುಖ್ ಪಠಾಣ್ಗೆ ಜೈಲಿನ ಇತರ ಕೈದಿಗಳು ಥಳಿಸಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ.
ಶಾರುಖ್ ಪಠಾಣ್ ಮತ್ತು ಇತರ ಕೈದಿಗಳ ಮಾತುಕತೆ ವೇಳೆ ಯಾರನ್ನು ಯಾವ ಕಾರಣಕ್ಕೆ ಬಂಧಿಸಲಾಗಿದೆ ಎಂಬ ಬಗ್ಗೆ ಅವರ ನಡುವೆ ಚರ್ಚೆ ನಡೆದಿದ್ದು, ಈ ವೇಳೆ ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ ಉಮೇಶ್ ಕೊಲ್ಹೆಯ ಕೊಲೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಶಾರುಖ್ ಪಠಾಣ್ ಹೇಳಿದ್ದಾನೆ.ಇದರಿಂದ ಆಕ್ರೋಶಗೊಂಡಆರೋಪಿಗಳಾದ ಕಲ್ಪೇಶ್ ಪಟೇಲ್, ಹೇಮಂತ್ ಮನೇರಿಯಾ, ಅರವಿಂದ್ ಯಾದವ್, ಶ್ರವಣ್ ಚವ್ಹಾಣ್ ಅಲಿಯಾಸ್ ಅವನ್ ಮತ್ತು ಸಂದೀಪ್ ಜಾಧವ್ ಸೇರಿಕೊಂಡು ಶಾರುಖ್ ಪಠಾಣ್ ಮೇಲೆ ಹಲ್ಲೆ ನಡೆಸಿದ್ದಾರೆ.
ಆರ್ಥರ್ ರೋಡ್ ಜೈಲಿನ ಸರ್ಕಲ್ ನಂ.11ರ ಬ್ಯಾರಕ್ ನಂ.2ರಲ್ಲಿ ಈ ಗಲಾಟೆ ನಡೆದಿದೆ. ಈ ಬಗ್ಗೆ ಮಾಹಿತಿ ಪಡೆದ ಜೈಲು ಭದ್ರತಾ ಸಿಬ್ಬಂದಿ ತಕ್ಷಣ ಪಠಾಣ್ನನ್ನು ಇತರ ಆರೋಪಿಗಳಿಂದ ಬೇರ್ಪಡಿಸಿದರು.
ಪಠಾಣ್ ಕೈ ಮತ್ತು ಕುತ್ತಿಗೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಜೈಲು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾರಾಗೃಹದ ಅಧಿಕಾರಿ ಅಮೋಲ್ ಚೌರೆ ಅವರ ದೂರಿನ ಮೇರೆಗೆ ಪೊಲೀಸರು ಜೈಲಿಲ್ಲಿ ಶಾಂತಿ ಕದಡುವ ಮತ್ತು ಥಳಿಸಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 143, 147, 149, 323 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರ (ಜುಲೈ 23) ಈ ಘಟನೆ ನಡೆದಿದ್ದು, ಮಂಗಳವಾರ (26) ರಾತ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.