ಹೊಸದಿಗಂತ ವರದಿ ಗದಗ:
ಬೆಳೆ ನಷ್ಟ, ಬ್ಯಾಂಕ್ನಲ್ಲಿ ಸೂಕ್ತ ಸಮಯದಲ್ಲಿ ದೊರೆಯದ ಸಾಲ, ಮಾಡಿದ ಕೈ ಸಾಲ ತೀರಿಸಲಾಗದೆ ಮನನೊಂದು ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ನಡೆದಿದೆ.
25ವರ್ಷದ ಪರಸಪ್ಪ ಉಮಚಗಿ ನೇಣಿಗೆ ಶರಣಾದ ರೈತ. ಪರಸಪ್ಪ ತಮ್ಮ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ, ಮೆಣಸಿನಕಾಯಿ ಬೆಳೆದಿದ್ದರು. ಸರಿಯಾದ ಸಮಯಕ್ಕೆ ಮಳೆ ಬಾರದೆ ಬೆಳೆಯಲ್ಲಾ ನಾಶವಾಗಿದೆ. ಅಲ್ಲದೆ, ಮೃತರ ತಂದೆ ಕೆನರಾ ಬ್ಯಾಂಕ್ ನಲ್ಲಿ 1.20 ಲಕ್ಷ ರೂ.ಸಾಲ ಮಾಡಿದ್ದರು. ಬ್ಯಾಂಕ್ ನವರು ಸಾಲ ಮರುಪಾವತಿ ಮಾಡಲು ಒತ್ತಾಯ ಮಾಡಿದ್ದರಿಂದ ಕೈ ಸಾಲ ಮಾಡಿ ಪೂರ್ತಿ ಹಣವನ್ನು ಬ್ಯಾಂಕ್ಗೆ ಕಟ್ಟಿದ್ದರು.
ಬ್ಯಾಂಕ್ ಮತ್ತೆ ಸಾಲ ಮಂಜೂರು ಮಾಡಲು ನಿರಾಕರಿಸಿದ್ದು, ಕೈ ಸಾಲಗಾರರ ಕಾಟ ಹಾಗೂ ಬೆಳೆ ಬಾರದ ಹಿನ್ನಲೆಯಲ್ಲಿ ಮನನೊಂದಿದ್ದ ರೈತ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದಾನೆ.
ಈ ಬಗ್ಗೆ ಗದಗ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.