ಹೊಸದಿಗಂತ ವರದಿ, ಕಲಬುರಗಿ
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಅಫಜಲಪುರ ತಾಲೂಕಿನ ದೇವಲ್ ಗಾಣಗಾಪೂರ್ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ ದತ್ತನ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ್ ಅವರು, ಜಿಲ್ಲೆಯ ಕೆಲ ರಸ್ತೆ ಹಾಗೂ ಬ್ರಿಜ್ ಕಾಮಗಾರಿಗಳನ್ನು ಕೇಂದ್ರ ಸರ್ಕಾರದ ಅನುದಾನದಡಿ ಕೈಗೊಳ್ಳಬೇಕು ಮನವಿ ಸಲ್ಲಿಸಿದರು.
ತಾಲೂಕಿನ ಅಫಜಲಪುರದ ಸ್ಟೇಷನ್ ಗಣಗಾಪೂರ್ ದಿಂದ ದೇವಲ್ ಗಣಗಾಪೂರ್ ವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಬೇಕು. ದೇವಲ್ ಗಣಗಾಪೂರ್ ದಿಂದ ಸೊಲ್ಲಾಪುರದ ರಾಷ್ಟ್ರಿಯ ಹೆದ್ದಾರಿ 13ಕ್ಕೆ ಸಂಪರ್ಕ ಕಲ್ಪಿಸುವ ಕರ್ಜಗಿ, ಅಫಜಲಪುರ, ಮಣ್ಣೂರ, ಹೊಸೂರು ಮಾರ್ಗವಾಗಿ ರಸ್ತೆಯನ್ನು ಅಭಿವೃದ್ಧಿ ಪಡೆಸಬೇಕು.
ಕಲಬುರಗಿ ನಗರದ ಹೊರವಲಯದ ಆಳಂದ ರಸ್ತೆಯ ಆಳಂದ ಚಕ್ ಪೋಸ್ಟ್, ಬೀದರ್ ರಸ್ತೆಯ ಹುಮನಬಾದ್ ರಿಂಗ್ ರಸ್ತೆ ಹಾಗೂ ಜೇವರ್ಗಿ ರಸ್ತೆಯ ರಾಮ ಮಂದಿರ ಹತ್ತಿರ ಫ್ಲೈ ಓವರ್ ಗಳನ್ನು ನಿರ್ಮಿಸಬೇಕು ಎಂದು ಮನವಿ ಸಲ್ಲಿಸಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಕಾಮಗಾರಿಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಮಾಲೀಕಯ್ಯ ಗುತ್ತೇದಾರ್ ತಿಳಿಸಿದರು.