ಹೊಸದಿಗಂತ ಡಿಜಿಟಲ್ ಡೆಸ್ಕ್ :
ಶ್ರೇಷ್ಠವಾದ ಶ್ರದ್ಧಾಕೇಂದ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೇಂದ್ರ ಸರಕಾರದ ಸ್ವದೇಶಿ ದರ್ಶನ್ ಯೋಜನೆಯನ್ನು ಜಾರಿಗೆ ತರಲು ಉತ್ಸೂಕಳಾಗಿದ್ದೇನೆ.ದೇವಳದಿಂದ ಈ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳಿಸಿ, ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಈ ಬಗ್ಗೆ ಬಂದರೆ ಖಂಡಿತವಾಗಿಯೂ ಸ್ವದೇಶಿ ದರ್ಶನ್ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ್ಸಥಾನಕ್ಕೆ ಮಂಗಳವಾರ ಭೇಟಿ ನೀಡಿದ ಸಚಿವರು ಶ್ರೀ ದೇವಳದ ಕಿರುಷಷ್ಠಿ ಮಹೋತ್ಸವದ ಕಾರ್ತಿಕ ವೇದಿಕೆಯಲ್ಲಿ ಆಧುನಿಕ ಭಾರತ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಎಂಬ ವಿಷಯವಾಗಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಪ್ರಾಂಜಲಿ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ದೇವಾಲಯಗಳು ಶ್ರದ್ಧಾಕೇಂದ್ರಗಳು ಇಲ್ಲಿ ನಂಬಿಕೆಯ ಮೂಲಕ ನಾವು ಆರಾಧನೆ ಮಾಡುತ್ತೇವೆ.ಇಲ್ಲಿ ಅವರವರ ನಂಬಿಕೆ ಮತ್ತು ಆರಾಧನೆಗಳನ್ನು ನಾವು ಗೌರವಿಸಬೇಕು. ಪ್ರತಿ ಧರ್ಮದ ಆಚರಣೆಗಳನ್ನು ನಾವು ಗೌರವಿಸಬೇಕು ಎಂದರು.
ದೇವಸ್ಥಾನಗಳು ನಂಬಿಕೆಯ ತಾಣಗಳಾಗಿವೆ.ಶ್ರೀ ದೇವರ ಆಶೀರ್ವಾದವು ಬದುಕು ಬದಲಾಯಿಸುವ ಬೆಳಕಾಗಿದೆ.ಭಕ್ತರು ತಮ್ಮ ಇಚ್ಚೆಯ ಮೂಲಕ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಅಭೀಷ್ಠೆಗಳನ್ನು ಈಡೇರಿಸುತ್ತಾರೆ.ಅದೇ ರೀತಿ ನಾನು ಕೂಡಾ ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಸೇವೆ ನೆರವೇರಿಸಿದ್ದೇನೆ.ನಾನು ಈ ಹಿಂದಿನಿಂದ ಇಲ್ಲಿಗೆ ಬರುವ ಚಿಂತನೆ ಮಾಡಿದ್ದೆ ಇಂದು ಅದು ಈಡೇರಿದೆ.ಇದು ದೇವರ ಸಂಕಲ್ಪವಾಗಿದೆ. ಕ್ಷೇತ್ರ ಭೇಟಿಯಿಂದ ತುಂಬು ಸಂತಸವಾಗಿದೆ ಎಂದು ಸಚಿವರು ತಿಳಿಸಿದರು.
ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ,ಎಸ್ ಎಸ್ ಪಿ ಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ನಾಯಕ್ , ಕೆ ಎಸ್ ಎಸ್ ಕಾಲೇಜಿನ ಪ್ರಾಂಶುಪಾಲ ದಿನೇಶ್ ಪಿ ಟಿ, ವೇದಿಕೆಯಲ್ಲಿದ್ದರು. ಪ್ರಾಧ್ಯಾಪಕ ಡಾ. ಗೋವಿಂದ ಎನ್ ಎಸ್ ಸ್ವಾಗತಿಸಿದರು.ವಿದ್ಯಾರ್ಥಿನಿ ಆಶಿತಾ ವಂದಿಸಿದರು. ಶೃತಿ ಕಾರ್ಯಕ್ರಮ ನಿರೂಪಿಸಿದರು.