ಹೊಸದಿಗಂತ ವರದಿ ಚಿತ್ರದುರ್ಗ
ಕಾಂಗ್ರೆಸ್ ಪಕ್ಷವು ಎಸ್ಐಆರ್ ವಿಚಾರದಲ್ಲಿ ಜನರಲ್ಲಿ ಅನಗತ್ಯ ಮತ್ತು ಅನಪೇಕ್ಷಿತ ಗೊಂದಲಗಳನ್ನು ಸೃಷ್ಟಿ ಮಾಡುತ್ತಿದೆ. ಚುನಾವಣಾ ಆಯೋಗದ ಮೇಲೆ ಜನರು ಇಟ್ಟಿರುವ ನಂಬಿಕೆ-ವಿಶ್ವಾಸಕ್ಕೆ ಧಕ್ಕೆ ತರುವ ಕಾರ್ಯ ನಡೆದಿದೆ ಎಂದು ಬಿಜೆಪಿ ಮುಖಂಡ ಹನುಮಂತೇಗೌಡ ಕಾಂಗ್ರೆಸ್ ಪಕ್ಷದ ಮೇಲೆ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಹಿಂದೆ ೨೦೦೨ರಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಕಾರ್ಯ ನಡೆದಿತ್ತು. ಕಳೆದ 24 ವರ್ಷಗಳಿಂದ ಎಸ್ಐಆರ್ ನಡೆದಿಲ್ಲ. ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಜೂನ್ 30 ರಿಂದ ಇದು ನಡೆಯುತ್ತಿದೆ. ಅನರ್ಹರನ್ನು ಮತಪಟ್ಟಿಯಿಂದ ಕೈಬಿಡುವುದು, ಅರ್ಹರನ್ನು ಉಳಿಸಿಕೊಂಡು ಮತಪಟ್ಟಿ ಶುದ್ಧಗೊಳಿಸುವ ಪ್ರಕ್ರಿಯೆ ಇದಾಗಿದೆ. ಬಿಎಲ್ಒಗಳ ಮೇಲೆ ಅನಗತ್ಯ ಒತ್ತಡ ಹೇರುವುದು ಕಂಡುಬರುತ್ತಿದೆ. ಇದನ್ನು ಒಪ್ಪಿಕೊಳ್ಳಲಾಗದು. ಬಿಎಲ್ಒಗಳ ಮೇಲೆ ಅನಗತ್ಯ ಒತ್ತಡ ಹೇರುವುದು ಮುಂದುವರಿದರೆ ನಾವು ಸುಮ್ಮನಿರುವುದಿಲ್ಲ. ಸೂಕ್ತ ಪ್ರತಿಕ್ರಿಯೆ ನೀಡಲಿದ್ದೇವೆ ಎಂದು ಎಚ್ಚರಿಸಿದ್ದಾರೆ.
ಕಾಂಗ್ರೇಸ್ ಪಕ್ಷವು ಇಲ್ಲಸಲ್ಲದ ವಿಷಯಗಳನ್ನು ಜನರಲ್ಲಿ ಬಿತ್ತಿ, ಬಣ್ಣ ಕಟ್ಟಿ ಹೇಳುವ ಕೆಲಸ ಮಾಡುತ್ತಿದೆ. ಗಡಿ ಭಾಗದಲ್ಲಿ ಹೊರ ರಾಜ್ಯದವರ, ಭಾರತೀಯ ಪೌರತ್ವ ಹೊಂದಿರದವರನ್ನು ಮತದಾರರನ್ನಾಗಿ ಸೇರಿಸಲಾಗಿದೆ. ರಾಜ್ಯದಲ್ಲಿ ಸುಮಾರು 60 ರಿಂದ 65 ಲಕ್ಷ ನಕಲಿ ಮತದಾರರನ್ನು ಕೈಬಿಡಲಾಗುವ ಸಾಧ್ಯತೆ ಇದೆ. ಮೃತಪಟ್ಟವರು, ನಕಲಿಗಳ ಹೆಸರು ಪಟ್ಟಿಯಲ್ಲಿದ್ದು ಅದನ್ನು ದೇಶದ ಭದ್ರತೆಯ ದೃಷ್ಟಿಯಿಂದ ಕೈಬಿಡುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
ಇದನ್ನೂ ಓದಿ:
ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಘನತೆಗೆ ತಕ್ಕಂತೆ ಮಾತನಾಡಲಿ. ಅವರು ಘನತೆ ಮರೆತು ಮಾತನಾಡುತ್ತಿದ್ದು, ಅದರಲ್ಲಿ ರಾಜಕೀಯ ದುರುದ್ದೇಶ ಅಡಗಿದೆ. ಬಿಎಲ್ಒಗಳು 3 ಬಾರಿ ಮನೆಗಳಿಗೆ ಭೇಟಿ ಕೊಟ್ಟು ನಕಲಿ ಮತ್ತು ಮೃತರ ಹೆಸರನ್ನು ಕೈಬಿಡುವ ಕೆಲಸ ಮಾಡಬೇಕಿದೆ. ಆದರೆ, ಕಾಂಗ್ರ್ರೆಸ್ ಪಕ್ಷವು ಜನರಿಗೆ ತಪ್ಪು ಮಾಹಿತಿ ಕೊಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡ ಹನುಮಂತೇಗೌಡ ಖಂಡಿಸಿದ್ದಾರೆ.



