ಹೊಸ ದಿಗಂತ ಡಿಜಿಟಲ್ ಡೆಸ್ಕ್
23,123 ಕೋಟಿ ರುಪಾಯಿಗಳು. ಇದು ಕೋವಿಡ್19ರ ಎರಡನೇ ಹಂತದ ಪ್ಯಾಕೇಜ್ ನಲ್ಲಿ ಕೇಂದ್ರ ಬಿಡುಗಡೆ ಮಾಡಿದ್ದ ಹಣ. ಮೂರನೇ ಅಲೆ ಬರುವುದಕ್ಕೆ ಮುಂಚೆ ಆಸ್ಪತ್ರೆ ವ್ಯವಸ್ಥೆಗಳನ್ನು ಸಜ್ಜುಗೊಳಿಸಿಕೊಂಡಿರಬೇಕು ಎಂಬ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಮೊತ್ತವನ್ನು ಲಭ್ಯವಾಗಿರಿಸಲಾಗಿತ್ತು. ಆದರೆ, ಈ ಪೈಕಿ ಕೇವಲ ಶೇ. 17ರಷ್ಟು ಹಣವನ್ನು ಮಾತ್ರ ರಾಜ್ಯಗಳು ವಿನಿಯೋಗಿಸಿಕೊಂಡಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಭಾನುವಾರ ನಡೆದ ಪರಾಮರ್ಶೆ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಇದೀಗ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚುತ್ತಿದೆ. ಸದ್ಯಕ್ಕೆ ಇದರ ಹೊಡೆತ ಎರಡನೇ ಅಲೆಯಷ್ಟು ತೀವ್ರವಾಗಿಲ್ಲ. ಆದರೂ ಪ್ರಕರಣಗಳು ಹೆಚ್ಚುತ್ತ ಹೋದಂತೆ ಆಸ್ಪತ್ರೆ ಸೇರುವವವರ ಸಂಖ್ಯೆ ಹೆಚ್ಚಬಹುದು. ಆದರೆ ಹೆಚ್ಚುವರಿ ಹಾಸಿಗೆಗಳು, ಐಸಿಯು, ಮಕ್ಕಳ ನಿಗಾ ಘಟಕಗಳು ಇವೆಲ್ಲ ನಿರೀಕ್ಷೆಯಂತೆ ನಿರ್ಮಾಣವಾಗಿಲ್ಲ. ಕಳೆದ ಆಗಸ್ಟ್ ನಲ್ಲಿಯೇ ಕೇಂದ್ರ ಹಣ ನೀಡಿದ್ದರೂ ಕೇಲವೇ ರಾಜ್ಯಗಳು ಇದನ್ನು ಉಪಯೋಗಿಸಿಕೊಂಡು ಪ್ರಗತಿ ತೋರಿವೆ.
ಸಾವಿರಕ್ಕಿಂತ ಹೆಚ್ಚು ಹೆಚ್ಚುವರಿ ಹಾಸಿಗೆಗಳನ್ನು ಸೇರ್ಪಡೆಗೊಳಿಸಿದವು ಕೇವಲ ಏಳು ರಾಜ್ಯಗಳು. ಇದರಲ್ಲಿ ಕರ್ನಾಟಕವೂ (3,021 ಹಾಸಿಗೆಗಳು) ಇದೆ ಎಂಬುದೊಂದು ಸಮಾಧಾನದ ಸಂಗತಿ.
ಇದೀಗ ಕೇಂದ್ರವು ರಾಜ್ಯಗಳನ್ನು ಈ ವಿಷಯದಲ್ಲಿ ತುರ್ತಾಗಿ ಕಾರ್ಯನಿರ್ವಹಿಸುವಂತೆ ಒತ್ತಡ ಹೇರಿದೆ.