ಹೊಸದಿಗಂತ ಡಿಜಿಟಲ್ ಡೆಸ್ಕ್:
“ಹಿಂದಿ ಬಾಷೆ ಬರದೇ ಇರುವವರು ಹಿಂದುಸ್ಥಾನದವರಲ್ಲ, ಅವರು ವಿದೇಶಿಯರಿದ್ದಂತೆ” ಎನ್ನುವ ಮೂಲಕ ಉತ್ತರ ಪ್ರದೇಶದ ಮೀನುಗಾರಿಕೆ ಸಚಿವ ಸಂಜಯ್ ನಿಶಾದ್ ವಿವಾದವನ್ನು ಹುಟ್ಟುಹಾಕಿದ್ದಾರೆ.
ಬಿಜೆಪಿ ಮಿತ್ರಪಕ್ಷವಾದ ನಿರ್ಬಲ್ ಇಂಡಿಯನ್ ಶೋಷಿತ್ ಹಮಾರಾ ಆಮ್ ದಳದ ಮುಖ್ಯಸ್ಥರಾಗಿರುವ ಸಂಜಯ್ ನಿಶಾದ್ ಪತ್ರಕರ್ತರೊಂದಿಗೆ ಮಾತನಾಡುವಾಗ “ಭಾರತದಲ್ಲಿ ವಾಸಿಸಲು ಬಯಸುವವರು ಹಿಂದಿಯನ್ನು ಪ್ರೀತಿಸಬೇಕಾಗುತ್ತದೆ. ಹಿಂದಿಯನ್ನು ಪ್ರೀತಿಸದಿದ್ದರೆ ನೀವು ವಿದೇಶಿ ಅಥವಾ ವಿದೇಶಿ ಶಕ್ತಿಗಳೊಂದಿಗೆ ಸಂಬಂಧ ಹೊಂದಿದ್ದೀರಿ ಎಂದು ಭಾವಿಸಲಾಗುತ್ತದೆ. ನಾವು ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತೇವೆ, ಆದರೆ ಈ ದೇಶ ಒಂದೇ, ಮತ್ತು ಭಾರತದ ಸಂವಿಧಾನವು ಭಾರತವು ‘ಹಿಂದೂಸ್ತಾನ್’ ಅಂದರೆ ಹಿಂದಿ ಮಾತನಾಡುವವರಿಗೆ ಒಂದು ಸ್ಥಳ ಎಂದು ಹೇಳುತ್ತದೆ” ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಸೃಷ್ಟಿ ಮಾಡಿದ್ದಾರೆ.
ಮುಂದುವರಿದು ““ನನಗೆ ಎಲ್ಲಾ ಪ್ರಾದೇಶಿಕ ಭಾಷೆಗಳ ಬಗ್ಗೆ ಗೌರವವಿದೆ, ಆದರೆ ಕಾನೂನಿನ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆಯಾಗಿದೆ. ಕಾನೂನನ್ನು ಉಲ್ಲಂಘಿಸುವ ಯಾರಾದರೂ ಅವರು ಎಷ್ಟೇ ದೊಡ್ಡ ರಾಜಕಾರಣಿ ಅಥವಾ ಶಕ್ತಿಶಾಲಿಯಾಗಿದ್ದರೂ ಅವರನ್ನು ಜೈಲಿಗೆ ಕಳಿಸಬೇಕು” ಎಂದು ಹೇಳಿದ್ದಾರೆ.