ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಚಾಲಕನೊಬ್ಬ ಮೂವರ ಮೇಲೆ ಟ್ರಕ್ ಹರಿಸಿ ಕೊಲೆ ಮಾಡಿರುವ ಘಟನೆ ಚೆನ್ನೈನ ರೆಡ್ ಹಿಲ್ಸ್ನಲ್ಲಿರುವ ಖಾಸಗಿ ಟ್ರಕ್ ಪಾರ್ಕಿಂಗ್ ಯಾರ್ಡ್ನಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾನೆ. ಮಾಧ್ಯಮವೊಂದರ ವರದಿಯ ಪ್ರಕಾರ ರಾತ್ರಿ 7.30 ರ ಸುಮಾರಿಗೆ ಚಾಲಕ ಕನ್ಹಯ್ಯಾ ಸಿಂಗ್ (35) ಮತ್ತು ಕ್ರಿಶ್ ಕುಮಾರ್ (26) ಊಟ ಮಾಡುತ್ತಿದ್ದರು. ಈ ಸಮಯದಲ್ಲಿ ಸ್ಥಳಕ್ಕೆ ಬಂದ ಕುಮಾರನ್, ಕಮಲಾ ಕಣ್ಣನ್, ಮತ್ತು ನವೀನ್ ಚಾಲಕ ಹಾಗೂ ಕ್ಲೀನರ್ ಮೇಲೆ ಗಲಾಟೆ ಶುರು ಮಾಡಿದ್ದಾರೆ.
ಕುಡಿದ ಮತ್ತಿನಲ್ಲಿದ್ದ ಮೂವರು ಅವರ ಬಳಿಯಿದ್ದ ಊಟ ಕಸಿದು ಹಣ ನೀಡುವಂತೆ ಬೆದರಿಸಿದ್ದಾರೆ. ಹಣ ನೀಡದಿದ್ದಕ್ಕೆ ಇಬ್ಬರ ಮೇಲೆ ಈ ಮೂವರು ಯುವಕರು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಲ್ಲದೆ ಟ್ರಕ್ನ ಹೆಡ್ ಲೈಟ್ಗಳನ್ನು ಹೊಡೆದು ಹಾಕಿದ್ದಾರೆ. ಇದರಿಂದ ಗಲಾಟೆ ಮತ್ತಷ್ಟು ತಾರಕಕ್ಕೇರಿದೆ. ಕೋಪಗೊಂಡ ಚಾಲಕ ಕನ್ಹಯ್ಯಾ ಸಿಂಗ್ ಟ್ರಕ್ ಅನ್ನು ಮೂವರ ಮೇಲೆ ಹರಿಸಿದ್ದಾನೆ. ಸ್ಥಳದಲ್ಲೇ ಕುಮಾರನ್, ಕಮಲಾ ಕಣ್ಣನ್ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನವೀನ್ ಗಂಭೀರ ಗಾಯಗಳಿಂದ ಆಸ್ಪತ್ರೆ ಪಾಲಾಗಿದ್ದಾರೆ.
ರೆಡ್ ಹಿಲ್ಸ್ ಪೊಲೀಸರು ಐಪಿಸಿ ಸೆಕ್ಷನ್ 304 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕನ್ಹಯ್ಯಾ ಸಿಂಗ್ ಮತ್ತು ಕ್ರಿಶ್ ಕುಮಾರ್ ಅವರನ್ನು ಬಂಧಿಸಿದ್ದಾರೆ. ಇಬ್ಬರ ಸಾವಿನಿಂದ ಕೋಪಗೊಂಡ ಅವರ ಸ್ನೇಹಿತರು ಮತ್ತು ಸಂಬಂಧಿಕರು ಹೊಲದಲ್ಲಿದ್ದ ಹತ್ತು ಟ್ರಕ್ಗಳನ್ನು ಹಾನಿಗೊಳಿಸಿದ್ದಾರೆ.