ಹೊಸದಿಗಂತ ಡಿಜಿಟಲ್ ಡೆಸ್ಕ್ , ಮಂಗಳೂರು:
ರಾಜ್ಯದಲ್ಲಿ ತಾಂತ್ರಿಕ ಕೇಂದ್ರಗಳನ್ನಾಗಿ ಉನ್ನತೀಕರಿಸಲಾಗಿರುವ ಒಟ್ಟು 150 ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಲೋಕಾರ್ಪಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬೆಂಗಳೂರಿನ ಕಾರ್ಯಕ್ರಮದಲ್ಲಿ ನೆರವೇರಿಸಿದ್ದು, ಸ್ಥಳೀಯವಾಗಿ ಮಂಗಳೂರಿನ ಎರಡು ಕೇಂದ್ರಗಳನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ದ.ಕ. ಜಿಲ್ಲೆಯಲ್ಲಿ ತಾಂತ್ರಿಕ ಕೇಂದ್ರವನ್ನಾಗಿ ಉನ್ನತೀಕರಿಸಲಾಗಿರುವ ಐದು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಲೋಕಾರ್ಪಣೆಗೊಳಿಸಿದ್ದಾರೆ.
ನಗರದ ಕದ್ರಿಹಿಲ್ಸ್ನ ಐಟಿಐನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವೇದವ್ಯಾಸ ಕಾಮತ್, ಇದು ರಾಜ್ಯ ಸರಕಾರದ ವಿನೂತನ ಯೋಜನೆ. ಟಾಟಾ ಟೆಕ್ನಾಲಾಜೀಸ್ ಜತೆ ಒಪ್ಪಂದ ಮಾಡಿಕೊಂಡು ಹಲವು ಸಂಸ್ಥೆಗಳನ್ನು ಸೇರಿಸಿ ರಾಜ್ಯದಲ್ಲಿ ಇಂತಹ 150 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿಶೇಷ ಮುತುವರ್ಜಿಯಿಂದ ಟಾಟಾ ಟೆಕ್ನಾಲಾಜೀಸ್ ತನ್ನ ಸಾಮಾಜಿಕ ಬದ್ಧತೆಯ ಅಡಿಯಲ್ಲಿ ಈ ಕೊಡುಗೆ ನೀಡಿದೆ. ಪ್ರತಿ ಕೇಂದ್ರಕ್ಕೆ 34.61 ಕೋಟಿ ರೂ.ನಂತೆ ಅನುದಾನ ನೀಡಿದ್ದು, ವಿದ್ಯಾರ್ಥಿಗಳ ಜಾನಾರ್ಜನೆಗೆ ಸಿದ್ಧವಾಗಿದೆ. ಮಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರಕ್ಕೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ತಲಾ ಒಂದರಂತೆ ಎರಡು ಕೇಂದ್ರಗಳನ್ನು ಸರಕಾರ ನೀಡಿದ್ದು, ಪ್ರತಿ ವರ್ಷ ಸುಮಾರು 300ರಷ್ಟು ಮಂದಿ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲ ಆಗಲಿದೆ ಎಂದು ಹೇಳಿದರು.