ಹೊಸದಿಗಂತ, ವರದಿ, ರಾಯಚೂರು :
ಅಧಿಕಾರ ಸಿಕ್ಕಾಗ ಭ್ರಷ್ಟಾಚಾರ ರಹಿತ ಮತ್ತು ಜನಪರ ಆಡಳಿತ ನೀಡಿದಾಗ ಮಾತ್ರ ರಾಮ ರಾಜ್ಯ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗುತ್ತದೆ ವಿನಃ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಿಸಿದರೆ ರಾಮರಾಜ್ಯವಾಗಲು ಸಾಧ್ಯವೇ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ನಗರದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಉತ್ತಮ ಆಡಳಿತ ನೀಡಿದರೆ ರಾಮರಾಜ್ಯವಾಗುತ್ತದೆ. ಮಂದಿರ ನಿರ್ಮಾಣ ಮಾಡುವುದರಿಂದ ಅಲ್ಲ. ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟರೆ, ಸಾಮಾನ್ಯ ಜನರ ಹಿತದೃಷ್ಟಿಯಿಂದ ಅಧಿಕಾರ ನಡೆಸಿದರೆ ರಾಮರಾಜ್ಯವಾಗುತ್ತದೆ ಎಂದರು.
ಬಿಜೆಪಿಯಿಂದ ಬಂದಿದ್ದ ಜಗದೀಶ ಶೆಟ್ಟರ್ ಮತ್ತೆ ಬಿಜೆಪಿ ಸೇರಿದ್ದಾರೆ. ಅವರನ್ನು ನಾವು ಗೌರವದಿಂದಲೇ ನಡೆಸಿಕೊಂಡಿದ್ದೇವೆ. ಸೋತವರಿಗೆ ಎಂಎಲ್ಸಿ ಮಾಡಿದ ಉದಾಹರಣೆ ಕಾಂಗ್ರೆಸ್ಸಿನಲ್ಲಿಲ್ಲ. ಆದರೆ, ಶೆಟ್ಟರ್ ಅವರನ್ನು ಮಾಡಿದೆವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಯಾವ ಪಕ್ಷವನ್ನು ಬೇಕಾದರು ಸೇರಬಹುದು.
ಕಾಂಗ್ರೆಸ್ಸಿನಿoದ ಇನ್ನು ಅನೇಕರು ಬಿಜೆಪಿಗೆ ಬರುತ್ತಾರೆ ಎನ್ನುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಕುರಿತು ಪ್ರತಿಕ್ರೀಯಿಸಿದ ಸಚಿವ ಪಾಟೀಲ. ಜನತೆ ಅವರನ್ನು ಚುನಾವಣೆಯಲ್ಲಿ ಪರಾಭವಗೊಳಿಸಿ ಮೂಲೆಯಲ್ಲಿ ಕೂಡಿಸಿದ ಪರಿಣಾಮ ಅವರ ಹೇಳಿಕೆ ಹತಾಷೆಯಿಂದ ಕೂಡಿದ್ದಾಗಿಗೆ ಇನ್ನು ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಯುವ ನಿಧಿ ಯೋಜನೆಯಲ್ಲಿ ಇಗಾಗಲೇ ಒಂದು ಲಕ್ಷಕ್ಕೂ ಅಧಿಕ ನೋಂದಣಿ ಆಗಿದೆ. ಮಾರ್ಚ್ ಅಂತ್ಯದಲ್ಲಿ ೩ ಲಕ್ಷ ನೋಂದಣಿ ಆಗುವನಿರೀಕ್ಷೆ ಇದೆ. ಇಗಾಗಲೇ ೪.೨ ಲಕ್ಷ ಸರ್ಟಿಫಿಕೆಟ್ಗಳು ಜಮೆ ಆಗಿವೆ ಇವರೆಲ್ಲರದು ನೋಂದಣಿ ಆಗಲಿವೆ ಎಂದು ತಿಳಿಸಿದರು.
ಉದ್ಯೋಗ ಮೇಳವನ್ನು ಫೆ.೧೯, ೨೦ ಎರಡು ದಿನಗಳ ಕಾಲ ಆಯೋಜನೆ ಮಾಡಲಾಗುವುದು. ೫೦೦ಕ್ಕೂ ಅಧಿಕ ಕಂಪನಿಗಳನ್ನು ಗುರುತಿಸಲಾಗಿದೆ. ಉದ್ಯೋಗ ಮೇಳ ಮಾಡುವುದರಿಂದ ನಿರುದ್ಯೋಗ ಎಷ್ಟಿದೆ ಎನ್ನುವುದು ತಿಳಿಯುತ್ತದೆ. ಯಾವ ಕಂಪನಿಗಳು ಎಷ್ಟು ಉದ್ಯೋಗವನ್ನು ನೀಡಿತ್ತಾರೆ ಎನ್ನುವುದು ಸರ್ಕಾರಕ್ಕೆ ತಿಳಿಯುತ್ತದೆ ಹಾಗೂ ಯಾವ ಕೌಶಲ್ಯ ತರಬೇತಿಯನ್ನು ನೀಡಬೇಕಾಗುತ್ತದೆ ಎನ್ನುವುದು ಅರ್ಥವಾಗುತ್ತದೆ ಎಂದರು.