ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿ ಭಾಗದ ಹಲವು ವರ್ಷಗಳ ಕನಸು ನನಸಾಗುವ ಹಂತಕ್ಕೆ ಬಂದಿದೆ. ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ನಿಟ್ಟಿನಲ್ಲಿ ಮಹತ್ವದ ಪ್ರಾಯೋಗಿಕ ಪರೀಕ್ಷೆಗೆ ರೈಲ್ವೆ ಇಲಾಖೆ ಈಗ ಸಿದ್ಧತೆ ನಡೆಸಿದೆ.
ಕರ್ನಾಟಕದ ಅತ್ಯಂತ ಸವಾಲಿನ ರೈಲು ಮಾರ್ಗಗಳಲ್ಲಿ ಒಂದಾಗಿರುವ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿ.ಮೀ ಘಾಟ್ ವಿಭಾಗದಲ್ಲಿ ಜೂನ್ ಕೊನೆಯ ವಾರದಲ್ಲಿ ವಂದೇ ಭಾರತ್ ರೈಲಿನ ಟ್ರಯಲ್ ರನ್ ನಡೆಯುವ ಸಾಧ್ಯತೆ ಇದೆ. ಈ ಪರೀಕ್ಷೆಯ ಫಲಿತಾಂಶವೇ ಕರಾವಳಿಯಲ್ಲಿ ವಂದೇ ಭಾರತ್ ಓಡಾಟದ ಭವಿಷ್ಯ ನಿರ್ಧರಿಸಲಿದೆ.
ಇದನ್ನೂ ಓದಿ:
ಹಾಸನ-ಮಂಗಳೂರು ಮಾರ್ಗದ ಘಾಟ್ ವಿಭಾಗವು ತೀವ್ರ ತಿರುವುಗಳು, ಕಡಿದಾದ ಇಳಿಜಾರುಗಳು ಹಾಗೂ ಸುರಕ್ಷತಾ ಸವಾಲುಗಳಿಂದಾಗಿ ರೈಲ್ವೆ ಇಲಾಖೆಗೆ ತಲೆನೋವಾಗಿತ್ತು. ಇದೇ ಕಾರಣಕ್ಕೆ ಈ ಭಾಗದಲ್ಲಿ ಈಗ ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 30 ಕಿ.ಮೀಗೆ ಮಿತಿಗೊಳಿಸಲಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡೇ ವಂದೇ ಭಾರತ್ ರೈಲಿನಲ್ಲಿ ವಿಶೇಷ ಸ್ವಯಂಚಾಲಿತ ತುರ್ತು ಬ್ರೇಕಿಂಗ್ (AEB) ವ್ಯವಸ್ಥೆ ಅಳವಡಿಸಲಾಗುತ್ತಿದೆ. ನಿಗದಿತ ಮಿತಿಗಿಂತ ಹೆಚ್ಚು ವೇಗ ಕಂಡುಬಂದರೆ ರೈಲು ತಾನಾಗಿಯೇ ವೇಗ ಕಡಿಮೆ ಮಾಡುವ ತಂತ್ರಜ್ಞಾನ ಇದಾಗಿದೆ.
ಈಗಾಗಲೇ ಇದೇ ಮಾರ್ಗದಲ್ಲಿ ಐಸಿಎಫ್ ಹಾಗೂ ಎಲ್ಎಚ್ಬಿ ಬೋಗಿಗಳ ಯಶಸ್ವಿ ಪರೀಕ್ಷೆ ನಡೆದಿದೆ. ಇದೀಗ ವಂದೇ ಭಾರತ್ ರೈಲಿನ ಪರೀಕ್ಷೆ ಮಾತ್ರ ಬಾಕಿಯಿದ್ದು, ಅದಕ್ಕಾಗಿ ವಿಶೇಷ ರೇಕ್ ಸಿದ್ಧವಾಗುತ್ತಿದೆ. ರೈಲ್ವೆ ಮೂಲಗಳ ಪ್ರಕಾರ, ಜೂನ್ ತಿಂಗಳಲ್ಲಿ ನಡೆದ ಹಲವು ತಾಂತ್ರಿಕ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಅಂತಿಮ ಹಂತದ ಈ ಪರೀಕ್ಷೆಯೂ ಯಶಸ್ವಿಯಾದರೆ ರೈಲ್ವೆ ಸಚಿವಾಲಯದಿಂದ ಅನುಮೋದನೆ ಸಿಗುವ ಸಾಧ್ಯತೆ ಹೆಚ್ಚಾಗಿದೆ.



