‘ವರಹ ರೂಪಂ’ ಟ್ಯೂನ್ ಕದ್ದ ಆರೋಪ: ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕೊಟ್ಟ ಸ್ಪಷ್ಟನೆ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಸಿನಿಮಾ ದೇಶದೆಲ್ಲೆಡೆ ಅಬ್ಬರಿಸುತ್ತಿದೆ. ದಿನದಿಂದ ದಿನಕ್ಕೆ ಸಿನಿಮಾ ಪ್ರೇಕ್ಷಕರನ್ನು ತಲುಪುತ್ತಿದೆ. ಎಲ್ಲರ ಮನೆಮಾತಾಗಿದೆ.

ಈ ಎಲ್ಲ ಸಂಭ್ರಮ ನಡುವೆ ಇದೀಗ ‘ಕಾಂತಾರ’ ಸಿನಿಮಾ ಮೇಲೆ ಅಪವಾದವೊಂದು ಕೇಳಿಬಂದಿದೆ. ಚಿತ್ರದ ‘ವರಹ ರೂಪಂ’ ಹಾಡನ್ನು ಕದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಈ ಬಗ್ಗೆ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸ್ಪಷ್ಟನೆ ನೀಡಿದ್ದು, ಯಾವುದೇ ಕಾಪಿ ಆಗಿಲ್ಲ ಹೇಳಿದ್ದಾರೆ.

‘ವರಹ ರೂಪಂ’ ಹಾಡು ಚಿತ್ರದ ಜೀವಾಳ. ಆದರೆ ಮಲಯಾಳಂನ ‘ನವರಸಂ’ ಎನ್ನುವ ಆಲ್ಬಮ್ ಸಾಂಗ್ ಟ್ಯೂನ್ ಕದ್ದು ಅಜನೀಶ್ ಈ ಸಾಂಗ್ ಮಾಡಿದ್ದಾರೆ ಎನ್ನುವುದು ಕೆಲವರ ವಾದ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ.
ಆದರೆ ‘ನವರಸಂ’ ಆಲ್ಬಮ್ ಸಾಂಗ್‌ಗೂ ‘ಕಾಂತಾರ’ ಚಿತ್ರದ ‘ವರಹ ರೂಪಂ’ ಸಾಂಗ್‌ಗೂ ಸಾಕಷ್ಟು ಸಾಮ್ಯತೆಯಿದೆ. ಅದೇ ಕಾರಣಕ್ಕೆ ಇಂತಹ ಅನುಮಾನ ಮೂಡುವುದು ಸಹಜ. ಆದರೆ ಆಲ್ಬಮ್ ಸಾಂಗ್ ಮಾಡಿದವರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಯಾಕೆಂದರೆ ಒಬ್ಬ ಸಂಗೀತ ನಿರ್ದೇಶಕನಿಗೆ ಯಾವುದು ಕಾಪಿ ? ಯಾವುದು ಕಾಪಿ ಅಲ್ಲ ಎನ್ನುವುದು ಗೊತ್ತಾಗುತ್ತದೆ ಎಂದು ಅಜನೀಶ್ ಹೇಳಿದ್ದಾರೆ.

ವರಹ ರೂಪಂ ಹಾಗೂ ನವರಸಂ. ಎರಡೂ ಹಾಡುಗಳ ಸಂಯೋಜನೆ ಬೇರೆ ಬೇರೆ. ಆ ರಾಕ್‌ಬ್ಯಾಂಡ್ ಸ್ಟೈಲ್‌ನಿಂದ ಇನ್‌ಸ್ಪೈರ್ ಆಗಿದ್ದೀವಿ. ಆದರೆ ನಮ್ಮ ಹಾಡಿನ ಸಂಯೋಜನೆಯೇ ಬೇರೆ. ಸ್ಟೈಲ್ ವಿಚಾರದಲ್ಲಿ ‘ವರಹ ರೂಪಂ’ ಸಾಂಗ್‌ ಕೇಳಿ ಇನ್‌ಸ್ಪೈರ್ ಆಗಿರೋದು ನಿಜ. ಅದು ಯಾವ ರೀತಿ ಅಂದರೆ ಬರೀ ಸ್ಟೈಲ್‌. ಅದು ಬಿಟ್ಟು ಅದಕ್ಕು ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ಮಲಯಾಳಂ ಸಾಂಗ್‌ನ ತಲೆಯಲ್ಲಿ ಇಟ್ಟುಕೊಂಡು ಈ ಸಾಂಗ್ ಖಂಡಿತ ಮಾಡಿಲ್ಲ. ಇಂಗ್ಲೀಷ್ ಸಾಂಗ್ಸ್ ಕೇಳಿ ಕೆಲವೊಮ್ಮೆ ಇದೇ ಸ್ಟೈಲ್‌ನಲ್ಲಿ ಸಾಂಗ್ ಮಾಡೋಣ ಎಂದುಕೊಳ್ಳುತ್ತೀವಿ ಅಲ್ವಾ ಅದೇ ರೀತಿ ಇದು. ನವರಸಂ ಸಾಂಗ್ ರೀತಿ ರಾಕ್ ಬ್ಯಾಂಡ್, ಗಿಟಾರ್ ಸ್ಟೈಲ್‌ನಲ್ಲಿ ಮಾಡಬೇಕು ಎಂದುಕೊಂಡೆ. ನಾವು ತೋಡಿ, ವರಾಳಿ, ಮುಖಾರಿ ರಾಗಗಳನ್ನು ಬಳಸಿ ಈ ಸಾಂಗ್ ಮಾಡಿದ್ದೇವೆ. ರಾಗಗಳ ಛಾಯೆ ಒಂದೇ ರೀತಿ ಇರುವುದರಿಂದ ಕೇಳವವರಿಗೆ ಸಾಮ್ಯತೆ ಎನ್ನಿಸಬಹುದು. ಆದರೆ ಸಂಯೋಜನೆ ಬೇರೆ, ಟ್ಯೂನ್ ಬೇರೆ. ರಿದಮ್ಸ್, ಇನ್‌ಸ್ಟ್ರೂಮೆಂಟ್ಸ್ ಇರೋದನ್ನೇ ಬಳಸೋಕೆ ಸಾಧ್ಯ. ನಾನು ಎಲೆಕ್ಟ್ರಿಕ್ ಗಿಟಾರ್ ಬಳಸಿದ್ದೀನಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಮ್ಯೂಸಿಕ್ ಗೊತ್ತಿರುವವರು ಯಾರು ಕೂಡ ಇದು ಕಾಪಿ ಎಂದು ಹೇಳುವುದಿಲ್ಲ. ಯಾಕಂದರೆ ಇದು ರೆಗ್ಯುಲರ್ ಆಗಿ ಕಂಪೋಸ್ ಮಾಡುವ ಸಾಂಗ್ ಅಲ್ಲ. ಇದು ದಕ್ಷಿಣ ಕರ್ನಾಟಕದ ಕರ್ನಾಟಿಕ್ ಕ್ಲಾಸಿಕಲ್ ಕಂಪೋಸಿಷನ್. ಆ ರಾಗದ ಛಾಯೆ ಒಂದೇ ರೀತಿ ಇರುವುದರಿಂದ ಎರಡನ್ನು ಕೇಳಿದಾಗ ಒಂದೇ ಎನ್ನಿಸಬಹುದು. ಅವರು ಯಾವ ರಾಗ ಬಳಸಿದ್ದಾರೋ ಗೊತ್ತಿಲ್ಲ, ನಾನು ತೋಡಿ, ವರಾಳಿ, ಮುಖಾರಿ ರಾಗಗಳನ್ನು ಬಳಸಿದ್ದೇನೆ ಎಂದು ಅಜನೀಶ್ ಲೋಕನಾಥ್ ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!