ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಭಾರಿ ಮಳೆಯಾಗಿದ್ದು, ತಿರುನಲ್ವೇಲಿ, ತೂತುಕುಡಿ ಹಾಗೂ ಕನ್ಯಾಕುಮಾರಿ ಜಿಲ್ಲೆಗಳ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಇಲ್ಲಿನ ರಸ್ತೆಗಳು ಮತ್ತು ಹೆದ್ದಾರಿಗಳು ನದಿಗಳಂತೆ ಗೋಚರಿಸುತ್ತಿವೆ. ಪ್ರವಾಹದ ನೀರು ಜನವಸತಿ ಪ್ರದೇಶ ಹಾಗೂ ರಸ್ತೆಗಳ ಮೇಲೆ ಹರಿಯುತ್ತಿದೆ. ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜನರು ಆತಂಕಗೊಂಡಿದ್ದಾರೆ.
100ಕ್ಕೂ ಹೆಚ್ಚು ಮನೆಗಳು ಜಲಾವೃತ
ತಿರುನೆಲ್ವೇಲಿಯ ಸೀವಲಪೇರಿಯಲ್ಲಿನ ಕೆಲ ನಿವಾಸಿಗಳು ಎರಡು ಅಂತಸ್ತಿನ ಮನೆಗಳ ಟೆರೇಸ್ ಮೇಲೆ ಆಶ್ರಯ ಪಡೆದಿದ್ದು, ಇಲ್ಲಿನ ಮೀನಾಕ್ಷಿಪುರಂನಲ್ಲೂ ಇದೇ ದೃಶ್ಯ ಕಂಡುಬಂದಿದೆ. ನಾಗರಕೋಯಿಲ್ನ ನೆಸಾವಲರ್ ಕಾಲೋನಿಯಲ್ಲಿ 100ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಅಗ್ನಿಶಾಮಕ ಹಾಗೂ ವಿಪತ್ತು ನಿರ್ವಹಣ ತಂಡಗಳು ರಕ್ಷಿಸಿ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಿದ್ದಾರೆ. ‘ಇಂತಹ ಮಳೆ ಮತ್ತು ಪ್ರವಾಹವನ್ನು ನಾವು ಹಿಂದೆಂದೂ ನೋಡಿಲ್ಲ’ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ವೃದ್ಧೆ ಸಾವು
ರಾಜಪಾಳ್ಯಂ ಬಳಿಯ ವಸತಿ ಕಾಲೋನಿಯಲ್ಲಿ, ಮಳೆ ಸಂಬಂಧಿತ ಘಟನೆಯಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ತಾಮಿರಬರಣಿ ಸೇರಿದಂತೆ ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ರಸ್ತೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.
ಕೋವಿಲ್ಪಟ್ಟಿ-ಕಯತಾರು-ತೇವರ್ಕುಲಂ ರಸ್ತೆ ಜಲಾವೃತಗೊಂಡಿವೆ. ಕನ್ಯಾಕುಮಾರಿಯ ಇರವಿಪುದೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಕೆರೆ ಕಟ್ಟೆಗಳು ಒಡೆದು ಪ್ರವಾಹದ ಸಂಕಷ್ಟವನ್ನು ಹೆಚ್ಚಿಸಿವೆ.
#WATCH | Incessant rainfall leads to severe waterlogging in several parts of Tamil Nadu
(Visuals from Thoothukudi) pic.twitter.com/pGmpPJDXR2
— ANI (@ANI) December 18, 2023