ಹೊಸದಿಗಂತ ವರದಿ ಹುಬ್ಬಳ್ಳಿ:
ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ನಗರದ ಕಲಾ ಸುಜಯ ಸಂಸ್ಥೆ ವತಿಯಿಂದ ಆ.15 ರಂದು ಸಂಜೆ 5:30 ಕ್ಕೆ ಸವಾಯಿ ಗಂಧರ್ವ ಭವನದಲ್ಲಿ ವೀರ ಭಾರತಿ ನೃತ್ಯ ರೂಪಕ ಪ್ರದರ್ಶನವಾಗಲಿದೆ ಎಂದು ಕಲಾ ಸುಜಯ ಮ್ಯಾನೇಜಿಂಗ್ ಟ್ರಸ್ಟಿ ಸುಜಯ ಶಾನಭಾಗ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾ ಸುಜಯ ತಂಡದ 225ನೇ ಪ್ರಸ್ತುತಿ ಇದಾಗಿದ್ದು, ಹುಬ್ಬಳ್ಳಿಯಲ್ಲಿ ಮೂರನೇ ಬಾರಿ ನೃತ್ಯ ರೂಪಕ ಪ್ರದರ್ಶನ ಗೊಳ್ಳಲಿದ್ದು, ಸಂಸ್ಥೆಯ ಎರಡು ವರ್ಷದಿಂದ 25 ವರ್ಷದೊಳಗಿನ 75 ಕಲಾವಿದರು ನೃತ್ಯ ರೂಪಕದಲ್ಲಿ ಪಾಲ್ಗೊಳ್ಳುವರು. ಈ ನೃತ್ಯ ರೂಪಕ ಒಂದು ಗಂಟೆ ಅವಧಿ ಒಳಗೊಂಡಿದೆ ಎಂದರು.
ನೃತ್ಯ ರೂಪಕದ ಪ್ರದರ್ಶನದ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವನ್ನು ಅಖಿಲ ಭಾರತೀಯ ಪ್ರಜ್ಞಾಪ್ರವಾಹದ ಸಹ ಸಂಯೋಜಕ ರಘುನಂದನ್ ಉದ್ಘಾಟಿಸುವರು. ಅತಿಥಿಗಳಾಗಿ ಮೇಯರ್ ವೀಣಾ ಭರದ್ವಾಡ, ಶಾಸಕ ಮಹೇಶ ಟೆಂಗಿನಕಾಯಿ, ಅಂಕಣಕಾರ ರೋಹಿತ್ ಚಕ್ರತೀರ್ಥ, ಕ್ಷಮತಾ ಸೇವಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ, ದಕ್ಷಿಣ ಕನ್ನಡ ಬ್ರಾಹ್ಮಣ ಸಂಘದ ಅಧ್ಯಕ್ಷ ಅನಂತ ಪದ್ನಾಭ ಐತಾಳ, ಬಿಲ್ಲವ ಸಮಾಜದ ಅಧ್ಯಕ್ಷ ಆನಂದ ಪೂಜಾರಿ, ಬಿಜೆಪಿ ಮುಖಂಡ ಡಾ. ಕ್ರಾಂತಿಕಿರಣ, ಆನಂದ ಗುರುಸ್ವಾಮಿ, ಎಂ.ಎ. ಸುಬ್ರಹ್ಮಣ್ಯ, ಎಸ್.ಬಿ. ಶೆಟ್ಟಿ ಪಾಲ್ಗೊಳ್ಳುವರು ಎಂದರು. ಕಲಾ ಸುಜಯ ಸಂಸ್ಥೆ ಸಂಚಾಲಕರಾದ ಜೆ.ಎಲ್. ಶಾನಭಾಗ, ಹರ್ಷ ಪಟ್ಟಾಭಿ ಇದ್ದರು.