ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಿಎಂ ವೀರಪ್ಪ ಮೊಯ್ಲಿ (Veerappa Moily) ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ.
ಸೋಮವಾರ ಚಿಕ್ಕಬಳ್ಳಾಪುರ ನಗರದ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಭ್ಯರ್ಥಿ ರಕ್ಷಾರಾಮಯ್ಯ (Raksha Ramaiah) ಅವರಿಗೆ ಸಂಪೂರ್ಣ ಬೆಂಬಲ ಕೊಡುವುದಾಗಿ ಸ್ಪಷ್ಟಪಡಿಸಿದರು.
ನಾನು ಲೋಕಸಭಾ ಟಿಕೆಟ್ಗಾಗಿ ಸಾಕಷ್ಟು ಪ್ರಯತ್ನ ಪಟ್ಟೆ. ಆದರೆ ಹೈಕಮಾಂಡ್ ರಕ್ಷಾರಾಮಯ್ಯ ಅವರಿಗೆ ಟಿಕೆಟ್ ಕೊಟ್ಟಿದೆ. ಈಗ ನನ್ನ ಸಂಪೂರ್ಣ ಬೆಂಬಲ ರಕ್ಷಾರಾಮಯ್ಯ ಅವರಿಗೆ ನೀಡಲಿದ್ದೇನೆ. ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ ನಂಬಿ ಕಾಂಗ್ರೆಸ್ ಕೆಟ್ಟಿತ್ತು. ಆದರೆ ಈಗ ಜೆಡಿಎಸ್ ನಂಬಿ ಬಿಜೆಪಿ ಕೆಡಲಿದೆ. ಚಿಕ್ಕಬಳ್ಳಾಪುರದ ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಇದು ಅಭ್ಯರ್ಥಿಗೆ ಸಾಕಷ್ಟು ದೊಡ್ಡ ಶಕ್ತಿಯಾಗಿದೆ. ನಾನು ಸ್ಪರ್ಧಿಸುವಾಗ ಇಷ್ಟೊಂದು ಬೆಂಬಲ ಇರಲಿಲ್ಲ. ಆದರೆ ರಕ್ಷಾರಾಮಯ್ಯ ಅವರಿಗೆ ಆನೆ ಬಲ ಇದೆ. ನಿಮಗೆ ಸಾಕಷ್ಟು ಸೌಭಾಗ್ಯ ಇದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸಬೇಕು. ಕಾಂಗ್ರೆಸ್ ಭದ್ರಕೋಟೆ ಇಲ್ಲಿ ಗೆದ್ದರೆ ಇಡೀ ಜ್ಯಾತ್ಯತೀತ ಗೆಲ್ಲಲಿದೆ. ಈಗ ಸ್ಥಳೀಯ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲಲು ಬೇರೆ ಬೇರೆ ಚಟುವಟಿಕೆ ನಡೆಸುತ್ತಾರೆ. ಆದರೆ ನಾವೆಲ್ಲಾ ಒಗ್ಗಟ್ಟಾಗಿ ಅಭ್ಯರ್ಥಿ ಗೆಲುವಿಗೆ ರಾತ್ರಿ ಹಗಲು ಶ್ರಮಿಸಬೇಕು ಎಂದು ಕರೆ ನೀಡಿದರು.
ನಾನು ಸಾಯುವವರೆಗೂ ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ. ಕಳೆದ 10 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. 10 ವರ್ಷದಿಂದ ನಡೆಯದಿರುವ ಕೆಲಸ ನೀವು ಐದು ವರ್ಷದಲ್ಲಿ ಮಾಡಬೇಕಿದೆ. 2 ವರ್ಷದಲ್ಲಿ ಎತ್ತಿನಹೊಳೆ ನೀರು ಬರಲು ಹೋರಾಡಬೇಕು. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವಲಸೆ ಹೋಗುತ್ತಾರೆ ಎಂದು ವರದಿಯಾಗಿತ್ತು. ಬಾಗೇಪಲ್ಲಿ ಬಳಿ ಫ್ಲೋರೈಡ್ ಇತ್ತು. ಇದನ್ನೆಲ್ಲ ಹೋಗಲಾಡಿಸಲು ನಾನು ಶ್ರಮವಹಿಸಿದ್ದೆ. ಅದೇ ರೀತಿ ನೀನು ಮಾಡಬೇಕು. ಇದು ನನ್ನ ಕನಸಿನ ಕೂಸು ಎಂದು ಅಭ್ಯರ್ಥಿ ರಕ್ಷಾರಾಮಯ್ಯ ಅವರಿಗೆ ಕೆಲವು ಸೂಚನೆಗಳನ್ನು ಮೊಯ್ಲಿ ನೀಡಿದರು.