ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಬುಧವಾರ ಸಂಭವಿಸಿದ ಭೀಕರ ಅವಳಿ ಭೂಕಂಪಗಳ ಆಘಾತದಿಂದ ವೆನೆಜುವೆಲಾ ಚೇತರಿಸಿಕೊಳ್ಳುವ ಮುನ್ನವೇ, ಶುಕ್ರವಾರ ಉತ್ತರ ಕರಾವಳಿಯಲ್ಲಿ 4.9 ತೀವ್ರತೆಯ ಮತ್ತೊಂದು ಹೊಸ ಭೂಕಂಪ ಸಂಭವಿಸಿದೆ. ರಾಜಧಾನಿ ಕ್ಯಾರಕಾಸ್ ಹಾಗೂ ಮರಕೇ ನಗರಗಳಲ್ಲಿ ಇದರ ತೀವ್ರತೆ ಹೆಚ್ಚಾಗಿದ್ದು, ಜನರಲ್ಲಿ ಹೊಸ ಆತಂಕ ಮೂಡಿಸಿದೆ. EMSC ಪ್ರಕಾರ, ಇದರ ಕೇಂದ್ರಬಿಂದು ಮರಕೇಯಿಂದ 61 ಕಿ.ಮೀ ದೂರದಲ್ಲಿದೆ.
ಹೆಚ್ಚಿದ ಸಾವಿನ ಸಂಖ್ಯೆ: ಮೃತರ ಸಂಖ್ಯೆ 920ಕ್ಕೆ ಏರಿಕೆ
ಬುಧವಾರ ರಾತ್ರಿ ಸಂಭವಿಸಿದ 7.2 ಮತ್ತು 7.5 ತೀವ್ರತೆಯ ಮಹಾ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 920ಕ್ಕೆ ತಲುಪಿದ್ದು, 3,300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದುರಂತದಿಂದಾಗಿ ಇಡೀ ದೇಶವೇ ಸ್ಮಶಾನ ಸದೃಶವಾಗಿದೆ.
ಜೀವ ಉಳಿಸಲು ಕರಗುತ್ತಿದೆ ‘ಸುವರ್ಣ ಸಮಯ’
ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಜೀವಂತವಾಗಿ ರಕ್ಷಿಸಲು ಮೊದಲ 48 ರಿಂದ 72 ಗಂಟೆಗಳು ಅತ್ಯಂತ ನಿರ್ಣಾಯಕ. ಆದರೆ, ಸರ್ಕಾರಿ ರಕ್ಷಣಾ ತಂಡಗಳ ಕೊರತೆಯಿಂದಾಗಿ ಹತಾಶರಾದ ನಾಗರಿಕರು ತಾವೇ ಸ್ವತಃ ಕೈಯಾರೆ ಅವಶೇಷಗಳನ್ನು ಅಗೆದು ಪ್ರೀತಿಪಾತ್ರರನ್ನು ಹುಡುಕುತ್ತಿದ್ದಾರೆ. ಸಮಯ ಕಳೆದಂತೆ ಆಹಾರ, ನೀರಿಲ್ಲದೆ ಸಿಲುಕಿರುವವರ ಬದುಕುವ ಭರವಸೆ ಕ್ಷೀಣಿಸುತ್ತಿದೆ. ಹೊಸ ಭೂಕಂಪವು ಸದ್ಯದ ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಕಠಿಣಗೊಳಿಸಿದೆ.



