ಕ್ರಿಕೆಟ್ ಅಡಿ ಕುಳಿತಿದ್ದ ಪಶುವೈದ್ಯನಿಗೆ ಹೃದಯಾಘಾತ: ಸ್ಥಳದಲ್ಲೇ ಸಾವು

 ಹೊಸದಿಗಂತ ವರದಿ, ಚಿಕ್ಕಮಗಳೂರು:

ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಸೋಮವಾರಪೇಟೆಯ ಪಶುವೈದ್ಯ ಶಿವಪ್ಪ ಬಾದಾಮಿ ಎಂಬುವವರು ಹೃದಯಾಘಾತದಿಂದ ಮೈದಾನದಲ್ಲೇ ಕುಸಿದು ಬಿದ್ದು ಸಾವಪ್ಪಿದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.

ಸುಭಾಶ್ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಪಶುವೈದ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮೈಸೂರು ವಿಭಾಗ ಮಟ್ಟದ ಪಶುವೈದ್ಯ ಇಲಾಖೆ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾವಳಿ ಬೆಳಗ್ಗೆ ಆರಂಭಗೊಂಡಿತ್ತು. ಕೊಡಗು ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದ ಶಿವಪ್ಪ ಬಾದಾಮಿ ಅವರು ಉತ್ಸಾಹದಿಂದಲೇ ಪಾಲ್ಗೊಂಡು ಒಂದು ಪಂದ್ಯವನ್ನೂ ಆಡಿದ್ದರು.

ಮಧ್ಯಾಹ್ನ ನಡೆದ ಫೋಟೋ ಸೆಷೆನ್‌ನಲ್ಲಿ ಪಾಲ್ಗೊಂಡು ಕ್ರಿಕೆಟ್ ವೀಕ್ಷಿಸುತ್ತಾ ಕುಳಿತಿದ್ದ ಬಾದಾಮಿ ಅವರು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ತೀವ್ರ ಹೃದಯಾಘಾತ ಸಂಭವಿಸಿರುವುದು ಗೊತ್ತಾದ ಕೂಡಲೇ ಕೂಡಲೇ ಸ್ಥಳದಲ್ಲಿದ್ದ ಇತರೆ ವೈದ್ಯರು ಚಿಕಿತ್ಸೆಗೆ ಮುಂದಾದರು. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಬಾದಾಮಿ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಅವರ ಮೃತದೇಹವನ್ನು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಚಿಕ್ಕಮಗಳೂರು ಪಶುವೈದ್ಯ ಸಂಘ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಏಳು ಜಿಲ್ಲೆಗಳ ೧೨ ಕ್ರಿಕೆಟ್ ತಂಡಗಳು ಭಾಗವಹಿಸಿದ್ದವು. ಶಿವಪ್ಪ ಬಾದಾಮಿ ಅವರ ನಿಧನದ ಹಿನ್ನೆಲೆಯಲ್ಲಿ ಪಂದ್ಯಾವಳಿಯನ್ನು ಸ್ಥಗಿತಗೊಳಿಸಲಾಯಿತು. ಬಾದಾಮಿ ಅಕಾಲಿಕ ಮರಣಕ್ಕೆ ಪಶುವೈದ್ಯರು, ಸಿಬ್ಬಂದಿಗಳು ಕಂಬನಿ ಮಿಡಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!