ಹೊಸದಿಗಂತ ವರದಿ ರಾಯಚೂರು :
ತುಂಗಭದ್ರಾ ಎಡದಂಡೆಯ ಕಾಲುವೆಗೆ ನೀರನ್ನು ಹರಿಸುವಂತೆ ಆಗ್ರಹಿಸಿ ನಡೆಸಿದ ರೈತರ ಪ್ರತಿಭಟನೆ, ಹೋರಾಟಕ್ಕೆ ಮಣಿದ ಸರ್ಕಾರ ಬುಧವಾರ ನಾಲೆಗಳ ವೀಕ್ಷಣೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡವನ್ನು ಕಳಿಸಿದೆ.
ತುಂಗಭದ್ರಾ ಬಲದಂಡೆಯ 104 ಮೈಲಿನ ಕಾಲುವೆಗೆ ಕಳೆದ ಎರಡು ದಶಕದಿಂದ ಕೆಲವೆಡೆ ಅಲ್ಪ ಸ್ವಲ್ಪ ನೀರು ಬಂದರೆ ಇನ್ನು ಕೆಲವೆಡೆ ಒಂದೇ ಒಂದು ಹನಿ ನೀರು ಬರುತ್ತಿಲ್ಲ ಎಂದು ಸೋಮವಾರ ನಗರದದಿಂದ 7 ಮೈಲು ದೂರದಲ್ಲಿರುವ ಸಾತ್ ಮೈಲ್ ವೃತ್ತದಲ್ಲಿ ನೂರಾರು ರೈತರು ಸೇರಿ ಬೃಹತ್ ಪ್ರತಿಭಟನೆ ಕೈಗೊಂಡಿದ್ದರು.
ಕಾಲುವೆಗೆ ನೀರು ಬರುವ ಕುರಿತು ಪರಿಶೀಲನೆ ಮಾಡುವದಾಗಿ ಜಿಲ್ಲಾಡಳಿತ ಭರವಸೆ ನೀಡಿದ ಹಿನ್ನಲೆಯಲ್ಲಿ ಸೋಮವಾರ ರೈತರು ಪ್ರತಿಭಟನೆಯನ್ನು ಹಿಂದೆ ಪಡೆದುಕೊಂಡಿದ್ದರು. ಆದರೆ ಮಂಗಳವಾರ ಜಿಲ್ಲಾಡಳಿತ ಯಾವುದೇ ಪರಿಶಿಲನೆಗೆ ಮುಂದಾಗದೇ ಇದ್ದಾಗ ರೈತರು ಬುಧವಾರ ಪ್ರತಿಭಟನೆಗೆ ಮುಂದಾಗಿದ್ದರು. ಇದರ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬುಧವಾರ ಕಾಲುವೆ ಪರಿಶೀಲನೆಗೆ ಮುಂದಾಗಿರುವಂತೆ ಕಂಡುಬರುತ್ತಿದೆ.
ಬೆಳಿಗ್ಗೆ ರೈತರು ನಾತ್ ಮೈಲ್ ವೃತ್ತದಲ್ಲಿ ಪ್ರತಿಭಟನೆಗೆ ಸೇರುವುದಕ್ಕೆ ಗ್ರಾಮೀಣ ಭಾಗಗಳಿಂದ ಆಗಮಿಸುವುದಕ್ಕೆ ಆರಂಭಿಸಿದ್ದರು. ಆದರೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹಾಗೂ ಎಸ್ಪಿ ನಿಖಿಲ.ಬಿ ಅವರು ಪರಿಶೀಲನೆಗೆ ಬರುತ್ತಾರೆ ಎಂದು ತಿಳಿದು ಪ್ರತಿಭಟನೆಯನ್ನು ಹಿಂದೆ ಪಡೆದುಕೊಂಡಿರುವದಾಗಿ ರೈತರು ಪತ್ರಿಕೆಗೆ ತಿಳಿಸಿದರು.
ಜಿಲ್ಲಾಡಳಿತ ನಾಲಾ ವೀಕ್ಷಣೆಗೆ ಶಾಸಕ ಬಸನಗೌಡ ದದ್ದಲ ಅವರು ಜಿಲ್ಲಾಧಿಕಾರಿಗಳ ತಂಡದೊಂದಿಗೆ ಇದ್ದರು ಅವರಾದರೂ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿಯನ್ನು ನೀಡಬಹುದಾಗಿತ್ತು ಈ ಕುರಿತು ಅವರೂ ಸಹ ಮಾಹಿತಿ ನೀಡದಿರುವುದರ ಹಿಂದೆ ಏನೇನು ಅಡಗಿದೆಯೋ ಎನ್ನುವುದೇ ಅರ್ಥಮಾಡಿಕೊಳ್ಳುವುದು ಕಷ್ಟಕರ ಸಂಗತಿ ಎನ್ನುತ್ತಾರೆ ರೈತರು.