ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮತ್ತೆ ಪಕ್ಷಾಂತರದ ಚರ್ಚೆ ಜೋರಾಗಿದೆ. ದುರ್ಗಾ ಪೂಜೆಯ ಸಂಭ್ರಮ ಮುಗಿಯುವ ವೇಳೆಗೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆಯಿದೆ ಎಂಬ ಹೇಳಿಕೆ ಇದೀಗ ಭಾರಿ ಕುತೂಹಲ ಮೂಡಿಸಿದೆ.
17 ಮಂದಿ ಬಿಜೆಪಿಯತ್ತ
ಹೌದು! 20 ಸಂಸದರ ಪೈಕಿ 17 ಮಂದಿ ಒಟ್ಟಾಗಿ ಬಿಜೆಪಿ ಸೇರಲಿದ್ದಾರೆ ಎಂದು ಟಿಎಂಸಿಯ ಬಂಡಾಯ ನಾಯಕ ಹಾಗೂ ಕೂಚ್ಬಿಹಾರ್ ಸಂಸದ ಜಗದೀಶ್ ಚಂದ್ರ ಬರ್ಮಾ ಬಸುನಿಯಾ ಹೇಳಿಕೆಯೊಂದನ್ನು ನೀಡಿದ್ದಾರೆ. ದುರ್ಗಾ ಪೂಜೆಗೆ ಮುನ್ನ ಅಥವಾ ಬಳಿಕ ಈ 17 ಸಂಸದರು ಒಟ್ಟಾಗಿ ಬಿಜೆಪಿ ಸೇರುವ ಸಾಧ್ಯತೆಯಿದೆ ಎಂದು ಬಸುನಿಯಾ ತಿಳಿಸಿದ್ದಾರೆ.
ಒಂದೇ ಬಾರಿ ಮೂರನೇ ಎರಡರಷ್ಟು ಸದಸ್ಯರು ಪಕ್ಷ ಬದಲಾಯಿಸಿದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆ ಅನ್ವಯಿಸುವುದಿಲ್ಲ ಎಂಬ ಲೆಕ್ಕಾಚಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:
ಟಿಎಂಸಿಯ 20 ಬಂಡಾಯ ಸಂಸದರು ಜೂನ್ 14ರಂದು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ಜೊತೆ ವಿಲೀನಗೊಂಡು, ಬಳಿಕ ಆಡಳಿತಾರೂಢ ಎನ್ಡಿಎಗೆ ಬೆಂಬಲ ಘೋಷಿಸಿದ್ದರು. ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ, ಶಾಸಕಾಂಗ ಪಕ್ಷದ ಕನಿಷ್ಠ ಮೂರನೇ ಎರಡರಷ್ಟು ಸದಸ್ಯರು ವಿಲೀನಕ್ಕೆ ಒಪ್ಪಿದರೆ ಅನರ್ಹತೆಯಿಂದ ವಿನಾಯಿತಿ ದೊರೆಯುತ್ತದೆ. 20 ಸದಸ್ಯರ ಗುಂಪಿಗೆ ಈ ಮಿತಿ 14 ಸಂಸದರು. ಬಸುನಿಯಾ ಹೇಳಿಕೆಯಂತೆ 17 ಮಂದಿ ಬಿಜೆಪಿ ಸೇರಿದರೆ ಈ ಸಂಖ್ಯೆಯೂ ಮೀರಲಿದೆ.
ಎನ್ಡಿಎಗೆ ಹೊರಗಿನಿಂದ ಬೆಂಬಲ
ಇನ್ನು ಮೂವರು ಸಂಸದರು ಮಾತ್ರ ನೇರವಾಗಿ ಬಿಜೆಪಿ ಸೇರುವುದಿಲ್ಲ ಎನ್ನಲಾಗಿದೆ. ಅಬು ತಾಹೆರ್ ಖಾನ್, ಖಲೀಲುರ್ ರಹಮಾನ್ ಮತ್ತು ಯೂಸುಫ್ ಪಠಾಣ್ ಅವರು ಎನ್ಡಿಎಗೆ ಹೊರಗಿನಿಂದ ಬೆಂಬಲ ನೀಡಲಿದ್ದಾರೆ ಎಂದು ಬಸುನಿಯಾ ಹೇಳಿದ್ದಾರೆ.
ಈ ಹೇಳಿಕೆಯ ಬೆನ್ನಲ್ಲೇ ಬಂಗಾಳ ರಾಜಕೀಯದಲ್ಲಿ ಚರ್ಚೆ ಮತ್ತಷ್ಟು ತೀವ್ರಗೊಂಡಿದೆ. ಇತ್ತೀಚೆಗೆ ಬಸುನಿಯಾ ಹಾಗೂ ಅವರ ಪತ್ನಿ, ಟಿಎಂಸಿ ಶಾಸಕಿ ಸಂಗೀತಾ ರಾಯ್ ಸಿತೈಗೆ ತೆರಳಿದ್ದ ವೇಳೆ ಸ್ಥಳೀಯರು ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.



