ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಅದ್ದೂರಿಯಾಗಿ ನಡೆಯಿತು. ದೇಶದ ಪ್ರಧಾನಿ ನರೇಂದ್ರ ಮೋದಿ, ಶ್ರೀರಾಮನ ನೂತನ ವಿಗ್ರಹಕ್ಕೆ ಅರ್ಪಿಸಲಿರುವ ಬೆಳ್ಳಿ ಛತ್ರ ಹಾಗೂ ರೇಷ್ಮೆ ವಸ್ತ್ರವನ್ನು ಹಿಡಿದು ಪ್ರಾಣ ಪ್ರತಿಷ್ಠಾಪನೆ ಕಾರ್ಯಕಮದಲ್ಲಿ ತೊಡಗಿಕೊಂಡಿದ್ದಾರೆ.
ಅಮಿತಾಬ್ ಬಚ್ಛನ್, ರಜನಿಕಾಂತ್, ಚಿರಂಜೀವಿ, ದೇಶದ ಪ್ರಮುಖ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ, ನೀತಾ ಅಂಬಾನಿ ಆಗಮಿಸಿದ್ದಾರೆ.
ಈ ನಡುವೆ ಅಯೋಧ್ಯೆಯ ಐತಿಹಾಸಿಕ ಮಂದಿರದ ಎದುರು ಬಿಜೆಪಿಯ ಹಿರಿಯ ನಾಯಕಿ ಹಾಗೂ ರಾಮ ಮಂದಿರದ ಆಂದೋಲನಕ್ಕಾಗಿ ದೊಡ್ಡ ಮಟ್ಟದಲ್ಲಿ ಭಾಗಿಯಾಗಿದ್ದ ಉಮಾ ಭಾರತಿ ಹಾಗೂ ಸಾದ್ವಿ ರಿತಂಬರಾ ಅವರು ಭಾವುಕವಾಗಿ ಅಪ್ಪಿಕೊಂಡಿದ್ದಾರೆ.
ಈ ಚಿತ್ರವೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ವಿಚಾರವಾಗಿ ಯಾವುದಕ್ಕೂ ಸಿದ್ಧ ಎಂದು ಸಾರ್ವಜನಿಕವಾಗಿ ಇಬ್ಬರು ನಾಯಕಿಯರು ಘೋಷಿಸಿಕೊಂಡಿದ್ದರು.
ಅಯೋಧ್ಯೆಯ ಶ್ರೀರಾಮ ಮಂದಿರದ ಎದುರು ಬಂದಾಗ ಇಬ್ಬರೂ ಭಾವುಕವಾಗಿ ತಬ್ಬಿಕೊಂಡರು. ಈ ವೇಳೆ ಸಾಧ್ವಿ ರಿತಂಬರಾ ಅವರು ಕಣ್ಣೀರು ಕೂಡ ಹಾಕಿದರು. ಅದರೊಂದಿಗೆ ದೀರ್ಘಕಾಲದಿಂದ ನಡೆದ ಹೋರಾಟಕ್ಕೆ ಸಿಕ್ಕ ಜಯ ಅವರ ಮುಖದಲ್ಲಿ ಕಾಣುತ್ತಿತ್ತು.