ಚುನಾವಣಾ ಅಖಾಡದಲ್ಲಿ ವಿಜಯೇಂದ್ರ ಹವಾ: ಬಿಜೆಪಿಯಿಂದ ಮೆಗಾ ಪ್ಲಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ಚುನಾವಣಾ ಅಖಾಡದಲ್ಲಿ ಬಿರುಸಿನ ಮತ ಪ್ರಚಾರ ನಡೆಯುತ್ತಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಯ ದೆಹಲಿ ನಾಯಕರು ಕರುನಾಡ ಅಬ್ಬರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಬಿಜೆಪಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಸೇರಿದಂತೆ ಹಲವು ನಾಯಕರನ್ನು ಕರೆಯಿಸಿ ರ್ಯಾಲಿ, ಸಮಾವೇಶ, ರೋಡ್ ಶೋಗಳನ್ನು ಮಾಡಿಸುತ್ತಿದೆ. ಅಲ್ಲದೇ ವಿವಿಧ ಸಮುದಾಯಗಳ ಮತದಾರರನ್ನು ಒಲೈಸುವ ತಂತ್ರಗಳು ಸಹ ಮಾಡಿದೆ.
ಜಗದೀಶ್ ಶೆಟ್ಟರ್​ ಹಾಗೂ ಲಕ್ಷ್ಮಣ ಸವದಿ ಅವರು ಪಕ್ಷ ಬಿಟ್ಟು ಕಾಂಗ್ರೆಸ್​​ ಸೇರಿದ್ದರಿಂದ ಬಿಜೆಪಿ ಹೈಕಮಾಂಡ್​ ನಾಯಕರಿಗೆ ಲಿಂಗಾಯತ ಮತಗಳು ಕೈತಪ್ಪುವ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಅದೇ ಸಮುದಾಯದ ಮಾಸ್ ಲೀಡರ್ ಎನ್ನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಎಷ್ಟು ಸಾಧ್ಯವೋ ಅಷ್ಟು ಬಳಸಿಕೊಳ್ಳುತ್ತಿದೆ. ಜೊತೆಗೆ ಬಿವೈ ವಿಜಯೇಂದ್ರ ಅವರ ಮೂಲಕವೂ ಸಹ ಲಿಂಗಾಯತ ಮತಗಳನ್ನು ಸೆಳೆಯಲು ರಣತಂತ್ರ ರೂಪಿಸಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್​, ಬಿವೈ ವಿಜಯೇಂದ್ರ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ.

ಲಿಂಗಾಯತ ಮತಗಳ ಪ್ರಭಾವ ಇರುವ ಕ್ಷೇತ್ರಗಳಲ್ಲಿ ವಿಜಯೇಂದ್ರ ಅವರಿಂದ ಪ್ರಚಾರ ಮಾಡಿಸಲು ಪ್ಲಾನ್ ಮಾಡಲಾಗಿದ್ದು, ಅದರಂತೆ ಈಗಾಗಲೇ ಸುಮಾರು 20 ಕ್ಷೇತ್ರದ ಪ್ರಚಾರಕ್ಕೆ ತೆರಳಲು ವಿಜಯೇಂದ್ರಗೆ ಹೈಕಮಾಂಡ್ ಸೂಚನೆ ನೀಡಿದೆ.

ಬಾಗಲಕೋಟೆ,ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ತುಮಕೂರು ಸೇರಿದಂತೆ ಲಿಂಗಾಯಿತ ಮತಗಳ ಪ್ರಭಾವ ಇರುವ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ವಿಜಯೇಂದ್ರ ಅವರಿಗೆ ಹೈಕಮಾಂಡ್ ಹೇಳಿದೆ. ಸ್ಟಾರ್ ಪ್ರಚಾರಕ ಅಲ್ಲದಿದ್ದರೂ ಕೊನೆ ಕ್ಷಣದಲ್ಲಿ ವಿಜಯೇಂದ್ರ ಕ್ಯಾಂಪೇನ್ ಮಾಡಿದರೆ ನಾವು ಲಿಂಗಾಯತ ಮತದಾರರು ಸೆಳೆಯಬಹುದು ಎನ್ನುವ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್​ನದ್ದಾಗಿದೆ. ಶ್ರೀರಾಮುಲು, ಗೋವಿಂದ ಕಾರಜೋಳ, ತಿಪ್ಪಾರೆಡ್ಡಿ,ಪೂರ್ಣಿಮಾ ಸೇರಿದಂತೆ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿಯುವಂತೆ ವಿಜಯೇಂದ್ರ ಹೈಕಮಾಂಡ್​ ಸೂಚಿಸಿದೆ.

ವಿಜಯೇಂದ್ರ ಹೀಗಾಗಿ ಕೊನೆ ಕ್ಷಣದಲ್ಲಿ ವಿವಿದೆಡೆ ಅಖಾಡಕ್ಕಿಳಿಸಿದ್ದು, ಅವರು ಓಡಾಡಲು ವಿಶೇಷ ಹೆಲಿಕಾಪ್ಟರ್ ನೀಡಲಾಗಿದೆ. ಹೆಲಿಕಾಪ್ಟರ್​ ಮೂಲಕ 5 ಜಿಲ್ಲೆಗಳಿಗೆ ತೆರಳಿ ರೋಡ್ ಶೋ ಸೇರಿದಂತೆ ಸಾರ್ವಜನಿಕ ಸಭೆಗಳಲ್ಲಿ ಭಾಗಿಯಾಗುವಂತೆ ಹೈಕಮಾಂಡ್​ ಹೇಳಿದೆ.

ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಈ ಭಾರಿ ಕರ್ನಾಟಕದಲ್ಲಿ ಪೂರ್ಣಬಹುಮತದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶಪಥ ಮಾಡಿದ್ದು, ಇದಕ್ಕೆ ಬೇಕಾದ ಎಲ್ಲಾ ರಣತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!