ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ, ಬಿಜೆಪಿ ಬಂಡಾಯ ನಾಯಕ ಕೆ.ಎಸ್.ಈಶ್ವರಪ್ಪ ವಿರುದ್ಧ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ನೀತಿ ಸಂಹಿತೆ ಚುನಾವಣಾ ನಿಯಮಾವಳಿಗಳು ಜಾರಿಯಲ್ಲಿದ್ದು, ಚುನಾವಣಾ ಕಚೇರಿಯ ಅನುಮತಿಯಿಲ್ಲದೆ ರಾಜಕೀಯ ಸಭೆ ನಡೆಸಿದ್ದಕ್ಕಾಗಿ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.
ಶನಿವಾರ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ನೊಣಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಂಬುತೀರ್ಥದ ದೇವಸ್ಥಾನ ಒಂದರಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಿ, ಅಲ್ಲೇ ಹತ್ತಿರದಲ್ಲಿದ್ದ ಅರ್ಚಕರ ಮನೆಗೆ ಹೋಗಿದ್ದಾರೆ. ಅವರ ಮನೆಯ ಅಂಗಳದಲ್ಲಿ ಸುಮಾರು 50 ರಿಂದ 60 ಜನರನ್ನು ಸೇರಿಸಿಕೊಂಡು 50 ಕುರ್ಚಿಗಳು ಹಾಗೂ ಹ್ಯಾಂಡ್ ಮೈಕ್ ಒಳಗೊಂಡಂತೆ ಸಣ್ಣ ವೇದಿಕೆ ರೀತಿಯಲ್ಲಿ ರಾಜಕೀಯ ಭಾಷಣ ಮಾಡಿದ್ದಾರೆ ಎನ್ನಲಾಗಿದೆ.
ಈಶ್ವರಪ್ಪ ಈ ಕಾರ್ಯಕ್ರಮ ನಡೆಸಲು ಚುನಾವಣಾ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಚುನಾವಣಾ ನೀತಿ ಕಾಯಿದೆ ಉಲ್ಲಂಘನೆ ಹಾಗೂ ನಿರ್ಲಕ್ಷ್ಯದ ಅಪರಾಧ ಮೊಕದ್ದಮೆಯಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದು ಕೆ.ಎಸ್.ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.