ಹಿಂಸಾಚಾರ ನಡೆಸುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ವಿಹಿಂಪ ಬಜರಂಗದಳ

ಹೊಸ ದಿಗಂತ ವರದಿ, ಚಿತ್ರದುರ್ಗ:

ದೇಶದಲ್ಲಿ ಹೆಚ್ಚುತ್ತಿರುವ ಧರ್ಮಾಂಧತೆ ಮತ್ತು ಹಿಂಸಾಚಾರದ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ – ಬಜರಂಗದಳ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕೆಲ ದಿನಗಳಿಂದ ದೇಶಾದ್ಯಂತ ಇಸ್ಲಾಮಿಕ್ ಜಿಹಾದಿ ಮತಾಂಧತೆ ಹೆಚ್ಚುತ್ತಿದೆ. ಹಿಂದೂಗಳ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಲಾಗುತ್ತಿದೆ. ಭಗವಾನ್ ಶ್ರೀರಾಮನ ಹಬ್ಬವಾದ ಶ್ರೀರಾಮ ನವಮಿಯಂದು ದೇಶಾದ್ಯಂತ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ಮತ್ತು ವ್ಯವಸ್ಥಿತವಾಗಿ ದಾಳಿಗಳನ್ನು ನಡೆಸಲಾಯಿತು ಎಂದು ಮನವಿಯಲ್ಲಿ ದೂರಲಾಗಿದೆ.
ಇದರಿಂದಾಗಿ ಹಲವೆಡೆ ಕರ್ಫ್ಯೂ ವಿಧಿಸಲಾಗಿದ್ದು, ದೇಶಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಂದೂ ಸಮಾಜವು ತಾಳ್ಮೆ ಕಾಯ್ದುಕೊಂಡಿತು. ಇದರಿಂದಾಗಿ ಯಾವುದೇ ದೊಡ್ಡ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ನಂತರ ಕೆಲವೆಡೆ ಹನುಮ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟವೂ ನಡೆಯಿತು ಎಂದು ಆರೋಪಿಸಿದರು.
ಹಿಂದೂ ಸಮಾಜವು ತಮ್ಮ ದೇಶದಲ್ಲಿ ತಮ್ಮ ದೇವತೆಗಳ ಮೆರವಣಿಗೆಯನ್ನು ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕದಲ್ಲಿ ಹಿಜಾಬ್ ವಿವಾದದ ಸಂದರ್ಭದಲ್ಲೂ ಭಜರಂಗದಳದ ಕಾರ್ಯಕರ್ತ ಹರ್ಷ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆ ಸಮಯದಲ್ಲಿ ಹಿಂದೂಗಳ ಮೇಲೆ ಹಲವೆಡೆ ದಾಳಿಗಳು ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಸಹೋದರಿ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರ ಹೇಳಿಕೆಗಳ ಮೇಲೆ ಕಳೆದ ಎರಡು ಶುಕ್ರವಾರದಂದು ಪ್ರಾರ್ಥನೆಯ ನಂತರ ಮಸೀದಿಗಳಿಂದ ಹೊರಬಂದ ಗಲಭೆಕೋರರು ಹಿಂದೂ ಮನೆಗಳು, ಅಂಗಡಿಗಳು, ವಾಹನಗಳಿಗೆ ದಾಳಿ ಮಾಡಿ ಬೆಂಕಿ ಹಚ್ಚಲಾಯಿತು. ಸರ್ಕಾರಿ ಆಸ್ತಿ, ದೇವಸ್ಥಾನಗಳಿಗೂ ಅಪಾರ ಹಾನಿಯಾಗಿದೆ ಎಂದರು.
ಪೊಲೀಸ್ ಪಡೆಗಳ ಮೇಲೂ ದಾಳಿ ನಡೆಸಲಾಯಿತು. ಹಲವರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ಬಂಗಾಳ, ಕೇರಳದಂತಹ ರಾಜ್ಯಗಳ ಸರಕಾರಗಳು ಈ ಇಸ್ಲಾಮಿಕ್ ಜಿಹಾದಿಗಳೊಂದಿಗೆ ನಿಂತಿರುವುದು ಕಂಡುಬರುತ್ತದೆ. ಆದರೆ ಹಿಂದೂ ದೇವರು ಮತ್ತು ದೇವತೆಗಳ ಬಗ್ಗೆ ಅನೇಕ ಧರ್ಮದ್ರೋಹಿಗಳಿಂದ ಅನಿಯಂತ್ರಿತ ಪ್ರಚಾರ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಕೋಮು ದ್ವೇಷ ಹರಡುವ ಹೇಳಿಕೆಗಳನ್ನು ನೀಡಲಾಗಿದ್ದರೂ ದೇಶದ ಹಲವು ಜಾತ್ಯಾತೀತ ಪಕ್ಷಗಳು ಮೌನವಹಿಸಿವೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಬೊಬ್ಬೆ ಹೊಡೆಯುತ್ತಿರುವ ಹಲವು ರಾಜಕೀಯ ಪಕ್ಷಗಳು ಕಳೆದೆರಡು ಶುಕ್ರವಾರ ನಡೆದ ಪ್ರಜಾಪ್ರಭುತ್ವದ ಕೊಲೆಗೆ ಮೌನವಹಿಸಿವೆ. ಈ ದಾಳಿಗಳಿಂದ ಇಡೀ ದೇಶದ ಹಿಂದೂ ಸಮಾಜಕ್ಕೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊನೆಯ ಎರಡು ಜುಮ್ಮಾಗಳ ಪ್ರಾರ್ಥನೆಯ ನಂತರ ಮಸೀದಿಗಳಿಂದ ಹೊರಬಂದ ಉದ್ರಿಕ್ತ ಗುಂಪುಗಳು ಮತ್ತು ಗಲಭೆಕೋರರನ್ನು ಗುರುತಿಸಬೇಕು. ಅವರ ವಿರುದ್ಧ ರಾಷ್ಟ್ರೀಯ ಸುರಕ್ಷತಾ ಕಾಯಿದೆ (ರಾಸುಕಾ) ಅಡಿಯಲ್ಲಿ ಕ್ರಮಕೈಗೊಳ್ಳಬೇಕು. ಅವರನ್ನು ಪ್ರಚೋದಿಸುವ ಮುಲ್ಲಾಗಳು, ಧರ್ಮಗುರುಗಳು, ಇತರ ಮುಸ್ಲಿಂ ಮತ್ತು ಜಾತ್ಯತೀತ ನಾಯಕರ ಗುರುತಿಸಿ, ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಪಡಿಸಿದರು.
ಜೂನ್ 17 ರಂದು ಶುಕ್ರವಾರದ ಪ್ರಾರ್ಥನೆಯ ನಂತರ ಹೊರಬರುವ ಜನಸಮೂಹವನ್ನು ಮೇಲ್ವಿಚಾರಣೆ ಮಾಡಬೇಕು. ಮುಲ್ಲಾಗಳು, ಮೌಲ್ವಿಗಳು ಅಥವಾ ಬೇರೆ ಯಾರಾದರೂ ಜಿಹಾದಿ ಭಾಷಣಗಳನ್ನು ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು. ದೇಶಾದ್ಯಂತ ಇಂತಹ ವಿಷಪೂರಿತ ಭಾಷಣ ಮಾಡುವವರನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೋಮುದ್ವೇಷ ಹರಡುವ, ಗಲಭೆಗೆ ಪ್ರಚೋದನೆ ನೀಡುವ ಮಸೀದಿ, ಮದರಸಗಳನ್ನು ತನಿಖೆಗೆ ಒಳಪಡಿಸಬೇಕು. ಇಸ್ಲಾಮಿಕ್ ಜಿಹಾದಿ ಮತಾಂಧತೆ ಹರಡುವ ಮೂಲಕ ದೇಶದಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುತ್ತಿರುವ ಜಮಿಯತ್ ಉಲೇಮಾ-ಎ-ಹಿಂದ್ (ಮದನಿ), ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ತಬ್ಲೀಘಿ ಜಮಾತ್ನಂತಹ ಮೂಲಭೂತವಾದಿ ಸಂಘಟನೆಗಳ ಮೇಲೆ ನಿಷೇಧಿಸಬೇಕೆಂದು ಆಗ್ರಹಿಸಿದರು.
ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಸ್ಥಳಗಳಲ್ಲಿ ಹಿಂದೂಗಳಿಗೆ ಭದ್ರತೆಗೆ ಒದಗಿಸಬೇಕು. ಕಡ್ಡಾಯವಾಗಿ ಪೊಲೀಸರನ್ನು ನಿಯೋಜಿಸಿಬೇಕು. ನಿಯೋಜಿಸಲಾದ ಭದ್ರತಾ ಸಿಬ್ಬಂದಿಗೆ ಸಾಕಷ್ಟು ಸೌಲಭ್ಯಗಳು ಮತ್ತು ಹಕ್ಕುಗಳನ್ನು ನೀಡಬೇಕು. ಮೇಲಿನ ಬೇಡಿಕೆಗಳ ಕುರಿತು ಶೀಘ್ರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಪಿ.ರುದ್ರೇಶ್, ಬಜರಂಗದಳ ಜಿಲ್ಲಾ ಸಂಚಾಲಕ ಸಂದೀಪ್, ಸಹಸಂಚಾಲಕ ಕೇಶವ್, ಮುಖಂಡರಾದ ಓಂಕಾರ್, ಗ್ರಾಮಾಂತರ ಅಧ್ಯಕ್ಷ ಶಶಿಧರ್, ಕಾರ್ಯಕರ್ತರಾದ ತೇಜು, ರಾಮು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!