ಹೊಸದಿಗಂತ ವರದಿ,ಹುಬ್ಬಳ್ಳಿ:
ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಬಿಜೆಪಿ ಇದಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.
ಭಾನುವಾರ ಇಲ್ಲಿಯ ಬಿಡನಾಳದಲ್ಲಿರುವ ಮೃತ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಮಂತ್ರಿ ಜಿ. ಪರಮೇಶ್ವರ ಅವರು ತನಿಖೆಯ ದಾರಿ ತಪ್ಪಿಸುವಂತಹ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಈ ರೀತಿ ಮಾಡುವ ಮೂಲಕ ತೃಷ್ಟೀಕರಣ ಮಾಡುತ್ತಿದೆ. ಇದನ್ನು ಕರ್ನಾಟಕದ ಜನತೆ ಯಾವತ್ತು ಕ್ಷಮಿಸುವುದಿಲ್ಲ. ಜನರು ಈ ಪ್ರಕರಣದಲ್ಲಿ ನ್ಯಾಯ ದೊರೆಯವುದೆಂದು ನಿರೀಕ್ಷೆಯಲ್ಲಿದ್ದಾರೆ. ರಾಜ್ಯ ಪೊಲೀಸರು ತನಿಖೆ ನಡೆಸುವಲ್ಲಿ ಅಸಮರ್ಥರಿದ್ದು, ಸಿಬಿಐಗೆ ಒಪ್ಪಿಸಲು ಆಗ್ರಹವಾಗಿದೆ ಎಂದು ಹೇಳಿದರು.
ಮೃತ ವಿದ್ಯಾರ್ಥಿನಿಗೆ ಹಾಗೂ ಕುಟುಂಬಕ್ಕೆ ನ್ಯಾಯ ದೊರೆಯಬೇಕು. ವಿದ್ಯಾರ್ಥಿ ತಂದೆಯೂ ಸಹ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿ ನೇಹಾ ಹತ್ಯೆ ದುಃಖ ಕುಟುಂಬಕ್ಕೆ ಅಷ್ಟೇ ಅಲ್ಲದೇ ಇಡೀ ಮನುಕುಲಕ್ಕೆ ಆಗಿದೆ. ಪಾಲಕರ ದುಃಖ ದಲ್ಲಿ ನಾವು ಸಹ ಭಾಗಿಯಾಗಿ ಸಾಂತ್ವನ ಹೇಳಿದ್ದೇವೆ. ವಿದ್ಯಾರ್ಥಿನಿಗೆ ಶಾಂತಿ ದೊರೆಯಲಿ. ನ್ಯಾಯ ದೊರೆಯುವವರೆಗೂ ಬಿಜೆಪಿ ಅವರ ಕುಟುಂಬದ ಜೊತೆ ಇರಲಿದೆ ಎಂದರು.