ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣಾ ಅಖಾಡ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳು ಗೆಲ್ಲಲು ಭಾರಿ ಕಸರತ್ತು ನಡೆಸುತ್ತಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಲೋಕಸಭಾ ಚುನಾವಣೆಗೂ ಹೊಸ ಉಚಿತ ಆಫರ್ ಘೋಷಿಸಿದ್ದಾರೆ. ದೆಹಲಿಯ 7 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲಿಸಿದರೆ ದಿಲ್ಲಿ ಜನತೆಯ ನೀರಿನ ಬಿಲ್ ಉಚಿತವಾಗಲಿದೆ ಎಂದು ಘೋಷಿಸಿದ್ದಾರೆ.
ದಿಲ್ಲಿ ಜನತೆಗೆ ಉಚಿತ ನೀರು ಒದಗಿಸಲು ಎಲ್ಲಾ ಕೆಲಸ ಮಾಡಿದ್ದೇನೆ. ಇದಕ್ಕಾಗಿ ಅನುದಾನ, ನಿಯಮ ಸೇರಿದಂತೆ ಎಲ್ಲಾ ಕೆಲಸಗಳು ಮುಗಿದಿದೆ. ಇದೀಗ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಸದಸ್ಯರನ್ನು ಗೆಲ್ಲಿಸಬೇಕು. ದೆಹಲಿಯಲ್ಲಿನ ಎಲ್ಲಾ 7 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಪ್ರತಿ ತಿಂಗಳ ನೀರಿನ ಪಾವತಿ ತಪ್ಪಲಿದೆ. ಸಂಪೂರ್ಣವಾಗಿ ಉಚಿತವಾಗಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಎಲ್ಲಾ 7 ಸ್ಥಾನಗಳನ್ನು ಗೆದ್ದರೆ ಲೆಫ್ಟಿನೆಂಟ್ ಗವರ್ನರ್ ಯಾವುದೇ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಸಾಧ್ಯವಿಲ್ಲ. ದೆಹಲಿಯ ಅಭಿವೃದ್ಧಿ ಕಾರ್ಯಗಳು ಯಾವುದೇ ಅಡೆ ತಡೆ ಇಲ್ಲದೆ ಸಾಗಲಿದೆ. ಆದರೆ ನನಗೆ ಇನ್ನೂ ಅರ್ಥವಾಗುತ್ತಿಲ್ಲ, ನೀವೆಲ್ಲಾ ಯಾಕೆ ಬಿಜೆಪಿಗೆ ಮತ ಹಾಕುತ್ತೀದ್ದಿರಿ? ನೀವು ಆಯ್ಕೆ ಮಾಡಿದ ಸಂಸದರು ದೆಹಲಿಗೆ ಏನು ಮಾಡಿದ್ದಾರೆ? ಹೀಗಾಗಿ ನಮಗೆ ಮತ ನೀಡಿ, ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ, 7 ಸ್ಥಾನ ಗೆದ್ದರೆ ಫಲಿತಾಂಶ ಬಂದ 15 ದಿನದ ಒಳಗೆ ನೀರಿನ ಬಿಲ್ ಸಂಪೂರ್ಣ ಉಚಿತವಾಗಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಹಳೇ ಬಿಲ್ ಪಾವತಿ ಮಾಡಬೇಕಿಲ್ಲ, ನೀರಿನ ಬಿಲ್ ಬಿಜೆಪಿ ಕಚೇರಿ ಎದರು ಹರಿದು ಹಾಕಿ ಅಥವಾ ಸುಟ್ಟು ಹಾಕಿ. ನಾನು ನಿಮ್ಮಜೊತೆಗಿದ್ದೇನೆ. ನಿಮ್ಮ ಕುಟುಂಬ ಸದಸ್ಯನಾಗಿ ಹೇಳುತ್ತಿದ್ದೇನೆ, ನಮ್ಮ ಅಭ್ಯರ್ಥಿಗಳ ಗೆಲ್ಲಿಸಿದರೆ ದೆಹಲಿಯಲ್ಲಿ ಪರ್ವಕಾಲ ಆರಂಭಗೊಳ್ಳಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.