ಹೊಸದಿಗಂತ ಡಿಜಿಟಲ್ ಡೆಸ್ಕ್ :
ರಾಜ್ಯದಲ್ಲಿ ಕೋಲಾಹ ಸೃಷ್ಟಿಸಿದ ವೋಟರ್ ಐಡಿ ಅಕ್ರಮ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಚಿಲುಮೆ ಸಂಸ್ಥೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕಪ್ಪುಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದೆ.
ಮತದಾನದ ಬಗ್ಗೆ ಜಾಗೃತಿಗಾಗಿ ಬಿಬಿಎಂಪಿ ನೀಡಿದ್ದ ಒಪ್ಪಿಗೆಯನ್ನು ದುರುಪಯೋಗ ಮಾಡಿಕೊಂಡು, ರಾಜಕೀಯ ಹಿತಾಸಕ್ತಿಯೊಂದಿಗೆ ಶಾಮೀಲಾಗಿ ಮತದಾರರ ದತ್ತಾಂಶ ಕಳವು ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಈ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದ್ದಾರೆ.
ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಅನುಮತಿ ಪತ್ರದಲ್ಲಿನ ಷರತ್ತುಗಳಿಗೆ ವ್ಯತಿರಿಕ್ತವಾಗಿ ಗುರುತಿನ ಚೀಟಿ ಸೃಷ್ಟಿಸಿಕೊಂಡು ನೈಜ ಬಿಎಲ್ಒಗಳೆಂದು ಬಿಂಬಿಸಿಕೊಂಡು/ಸೋಗುಹಾಕಿ ಸಾರ್ವಜನಿಕರನ್ನು ಮೋಸಗೊಳಿಸಿರುವುದು ದಾಖಲೆ ಹಾಗೂ ವರದಿಗಳಿಂದ ದೃಢಪಟ್ಟಿದೆ. ಹೀಗಾಗಿ ಸದರಿ ಸಂಸ್ಥೆ ಅಥವಾ ಸಂಸ್ಥೆಯಲ್ಲಿನ ನಿರ್ದೇಶಕರಿಂದ ಇಲ್ಲವೇ ಸದರಿ ಸಂಸ್ಥೆಯ ನಿರ್ದೇಶಕರುಗಳು ಸಹಭಾಗಿಯಾಗಿ ನಡೆಸಲ್ಪಡುತ್ತಿರುವ ಇತರೇ ಯಾವುದೇ ಸಂಸ್ಥೆಗೆ ಪಾಲಿಕೆ ವತಿಯಿಂದ ಉಚಿತ ಕಾರ್ಯಕ್ರಮಗಳಿಗೆ ಅನುಮತಿ ಮತ್ತು ಪಾಲಿಕೆಯು ಪಡೆದುಕೊಳ್ಳುವ ಸೇವೆ ಮತ್ತು ಸಂಗ್ರಹಣೆ ಟೆಂಡರ್ಗಳಲ್ಲಿ ಭಾಗವಹಿಸುವಿಕೆಗೆ ಹಾಗೂ ಇನ್ನಿತರೆ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ನೀಡದಂತೆ ನಿರ್ಬಂಧವನ್ನು ವಿಧಿಸಿ, ಸದರಿ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.