ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ,ಕಾಶ್ಮೀರ ವಿಧಾನಸಭೆಯಲ್ಲಿ ಆಡಳಿತರೂಢ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಶಾಸಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಆಡಳಿತ ಪಕ್ಷದ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಶಾಸಕರು ಚರ್ಚೆಗೆ ವಕ್ಫ್ ಕಾಯ್ದೆ ಕುರಿತು ಅವಕಾಶ ಕೋರಿ ನಿಲುವಳಿ ಸೂಚನೆ ಮಂಡಿಸಿದರು. ಆದರೆ ಚರ್ಚೆಗೆ ಅನುಮತಿ ನೀಡದ ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ನಿಯಮ 56 ಮತ್ತು 58 (7) ಅನ್ನು ಉಲ್ಲೇಖಿಸಿ ನಿಲುವಳಿ ಸೂಚನೆಯನ್ನು ವಜಾಗೊಳಿಸಿದರು. ಸುಪ್ರೀಂ ಕೋರ್ಟ್ನಲ್ಲಿ ವಿಷಯ ಇರುವುದರಿಂದ ಮತ್ತು ಅದರ ಪ್ರತಿಯನ್ನು ನಾನು ಹೊಂದಿರುವುದರಿಂದ, ನಾವು ಆ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ ಎಂದು ನಿಯಮವು ಸ್ಪಷ್ಟವಾಗಿ ಹೇಳುತ್ತದೆ ಎಂದು ಹೇಳಿದರು.
ಇದರಿಂದ ವಿಧಾನಸಭೆಯಲ್ಲಿಎನ್ಸಿ ಶಾಸಕರಾದ ಹಿಲಾಲ್ ಲೋನ್ ಮತ್ತು ಸಲ್ಮಾನ್ ಸಾಗರ್ ಆಕ್ರೋಶ ವ್ಯಕ್ತಪಡಿಸಿ, ವಕ್ಫ್ ಕಾಯ್ದೆಯ ಪ್ರತಿಗಳನ್ನು ಹರಿದು ಹಾಕಿದರು.
ಎನ್ಸಿ ಶಾಸಕ ಅಬ್ದುಲ್ ಮಜೀದ್ ಲಾರ್ಮಿ ಪ್ರತಿಭಟನೆಯಲ್ಲಿ ಸದನದಲ್ಲಿ ತಮ್ಮ ಜಾಕೆಟ್ ಹರಿದು ಸಿಟ್ಟು ಪ್ರದರ್ಶಿಸಿದರು. ಈ ಕಾನೂನನ್ನು ಹಿಂತೆಗೆದುಕೊಳ್ಳುವವರೆಗೆ ನಾವು ವಿಧಾನಸಭೆಯ ಕಲಾಪಗಳನ್ನು ನಡೆಸಲು ಬಿಡುವುದಿಲ್ಲ. ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗಿದೆ. ಅದಕ್ಕಾಗಿಯೇ ನಾನು ನನ್ನ ಜಾಕೆಟ್ ಹರಿದುಕೊಂಡೆ ಎಂದು ಹೇಳಿದರು.
ಎನ್ಸಿಯ ನಡೆಯನ್ನುವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ ಖಂಡಿಸಿದರು.