ಹೊಸದಿಗಂತ ವಿಜಯನಗರ:
ಜಿಲ್ಲೆಯ ಹೊಸಪೇಟೆ ನಗರದಲ್ಲಿ ಭರ್ಜರಿ ಪೊಲೀಸ್ ಬೇಟೆಯಾಗಿದ್ದು, ಲಾಡ್ಜ್ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಯಶಸ್ವಿಯಾಗಿ ಹತ್ತಿಕ್ಕಲಾಗಿದೆ. ಬಡಾವಣೆ ಪೊಲೀಸ್ ಠಾಣೆಯ ಅತ್ಯಂತ ಸಮೀಪದಲ್ಲೇ ಈ ಕೃತ್ಯ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ.
ಮೈಸೂರಿನ ‘ಒಡನಾಡಿ’ ಕೊಟ್ಟ ಸೀಕ್ರೆಟ್ ಮಾಹಿತಿ!
ನಗರದ ಎಪಿಎಂಸಿ ಮಾರುಕಟ್ಟೆ ಹತ್ತಿರವಿರುವ ಲಾಡ್ಜ್ನಲ್ಲಿ ದೀರ್ಘಕಾಲದಿಂದ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಮೈಸೂರಿನ ಖ್ಯಾತ ಸಾಮಾಜಿಕ ಸಂಸ್ಥೆ ‘ಒಡನಾಡಿ’ಯ ಸ್ಟಾನ್ಲಿ ಮತ್ತು ಪರಶುರಾಮ್ ಅವರಿಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಖಚಿತ ಮಾಹಿತಿ ಕಲೆಹಾಕಿದ ಸಂಸ್ಥೆಯು ತಕ್ಷಣವೇ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಎಸ್.ಜಾಹ್ನವಿ ಅವರಿಗೆ ಮಾಹಿತಿ ರವಾನಿಸಿತ್ತು.
ಎಸ್ಪಿ ಖಡಕ್ ಆ್ಯಕ್ಷನ್: ಮೂವರು ಮಹಿಳೆಯರ ರಕ್ಷಣೆ
ಮಾಹಿತಿ ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಎಸ್ಪಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ (ASP) ಜಿ.ಮಂಜುನಾಥ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದರು. ಬುಧವಾರ ಸಂಜೆ ಲಾಡ್ಜ್ ಮೇಲೆ ದಿಢೀರ್ ದಾಳಿ ನಡೆಸಿದ ಪೊಲೀಸರು, ದಂಧೆಯ ಜಾಲದಲ್ಲಿದ್ದ ಮೂವರು ನೊಂದ ಮಹಿಳೆಯರನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಅಧಿಕೃತ ಮೊಕದ್ದಮೆ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



