ಹೊಸದಿಗಂತ ವರದಿ, ಶ್ರೀರಂಗಪಟ್ಟಣ :
ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಕಾವೇರಿ ನದಿಗೆ 1 ಲಕ್ಷದ 72ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟ ಹಿನ್ನಲೆಯಲ್ಲಿ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಬಹುತೇಕ ಮುಳುಗಡೆಗೊಂಡು, ಸೇತುವೆ ಬಳಿಯ ತಡೆಗೋಡೆ ಹಾಗೂ ಸಂಪರ್ಕ ರಸ್ತೆ ಸಂಪೂರ್ಣವಾಗಿ ಹಾನಿಯಾಗಿದೆ.
ಬುಧವಾರ ಸಂಜೆಯಿಂದ ತಡರಾತ್ರಿ ವರೆವಿಗೂ ಕಾವೇರಿ ನದಿಗೆ 1,72,161 ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಬಹುತೇಕ ಮುಳುಗಡೆಗೊಂಡು, ಸಮೀಪದಲ್ಲಿನ ತಡೆಗೋಡೆ ಹಾಗೂ ವೆಲ್ಲೆಸ್ಲಿ ಸೇತುವೆ-ಶ್ರೀರಂಗಪಟ್ಟಣ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಕಿತ್ತುಹೋಗಿದೆ.
ಸೇತುವೆ ಸಮೀಪದಲ್ಲಿನ ತಡೆಗೋಡೆ ಬಹುತೇಕ ಕುಸಿದು ಬಿದ್ದಿದ್ದು, ಶ್ರೀರಂಗಪಟ್ಟಣ-ವೆಲ್ಲೆಸ್ಲಿ ಸೇತುವೆ ಮಾರ್ಗವಾಗಿ ಕಿರಂಗೂರು ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನದಿ ನೀರು ಹರಿದು ಹೋಗಿದೆ. ಇದರಿಂದಾಗಿ ಮೀಟರ್ಗಳಷ್ಟು ಉದ್ದದ ಡಾಂಬರ್ ರಸ್ತೆ ಕಿತ್ತು ಮುಂದಕ್ಕೆ ತಳ್ಳಿಹಾಕಿ, ಮಂಡಿಯುದ್ದ ಗುಂಡಿಗಳಾಗಿ ಸಂಪರ್ಕ ರಸ್ತೆ ಬಾಹಶ ಕಡಿತಗೊಂಡಿದೆ. ಜೊತೆಗೆ ಇದೇ ಸ್ಥಳದಲ್ಲಿ ಸಂಘ-ಸಂಸ್ಥೆಗಳು ನೆಟ್ಟು, ಬೆಳೆಸುತ್ತಿದ್ದ ವಿವಿಧ ಜಾತಿಯ ಗಿಡಗಳು ಪ್ರವಾಹಕ್ಕೆ ಸಿಲುಕಿ ಬೇರು ಸಹಿತ ನೆಲಕ್ಕುರುಳಿವೆ. ಸಾರ್ವಜನಿಕರು ನದಿ ಪ್ರದೇಶಕ್ಕೆ ತೆರಳದಂತೆ ಕಬ್ಬಿಣದಿಂದ ನಿರ್ಮಿಸಿದ್ದ ಗ್ರಿಲ್ಸ್ಗಳು ಸಹ ಕಿತ್ತು ಹಾಕಿದೆ.