ಹೊಸದಿಗಂತ ವರದಿ,ಮಡಿಕೇರಿ:
ಕೊಡಗು ಜಿಲ್ಲೆಯಾದ್ಯಂತ ಇರುವ ನದಿ ಹಾಗೂ ನದಿ ಮೂಲಗಳ ನೀರನ್ನು ಅಕ್ರಮ ಮತ್ತು ಅನಧಿಕೃತವಾಗಿ ಖಾಸಗಿ ಚಟುವಟಿಕೆಗಳಿಗೆ ಪಂಪ್ಸೆಟ್ ಬಳಸಿ ಅಥವಾ ಕಾಲುವೆಗಳ ಮುಖಾಂತರ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶ ಹೊರಡಿಸಿದ್ದಾರೆ.
ಕೊಡಗು ಜಿಲ್ಲೆಯಾದ್ಯಂತ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಕುಡಿಯುವ ನೀರಿನ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಸಾರ್ವಜನಿಕ ಹಿತಾಸಕ್ತಿಯಿಂದ ದಿ ಕರ್ನಾಟಕ ಇರಿಗೇಷನ್ ಆಕ್ಟ್, 1965 ರ ಕಲಂ 46 ರಲ್ಲಿರುವಂತೆ ಮತ್ತು ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 133 ಆರ್/ಡಬ್ಲ್ಯು ಕಲಂ 144 ರಲ್ಲಿ ದತ್ತವಾದ ಅಧಿಕಾರದಂತೆ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಆದೇಶದ ಉಲ್ಲಂಘನೆಯು ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆ 2005 ರ ಸೆಕ್ಷನ್ 51 ಬಿ ರಡಿ ದಂಡನೀಯವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಎಚ್ಚರಿಸಿದ್ದಾರೆ.