ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ವಯನಾಡು ಭೂಕುಸಿತದಿಂದಾಗಿ 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರ ಜೀವನ ಅಸ್ತವ್ಯಸ್ತಗೊಂಡಿದೆ. ವಯನಾಡಿನ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಕೂಡ ನಡೆಯುತ್ತಿದೆ.
ಇದರ ನಡುವೆ ಹಲವಾರು ದಕ್ಷಿಣ ಭಾರತದ ನಟರು ಸಂತ್ರಸ್ತರಿಗೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ನೆರವಾಗಲು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ತಮ್ಮ ಒಗ್ಗಟ್ಟನ್ನು ತೋರಿಸಿದ್ದಾರೆ.
ಇದೀಗ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಮುಖ್ಯಮಂತ್ರಿಗಳ ಕಚೇರಿಗೆ ಜಂಟಿ ಪತ್ರವನ್ನು ಕಳುಹಿಸಿದ್ದು, ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜಂಟಿ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.
ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿನ ಸಂತ್ರಸ್ತ ಕುಟುಂಬಗಳು ಮತ್ತು ಸಮುದಾಯಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಈ ವಿನಾಶ ಮತ್ತು ನಷ್ಟವು ಹೃದಯ ವಿದ್ರಾವಕವಾಗಿದೆ. ಕಷ್ಟದಲ್ಲಿ ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ಅಗತ್ಯ ನೆರವು ನೀಡಲು ಮತ್ತು ಪುನರ್ನಿರ್ಮಾಣ ಪ್ರಕ್ರಿಯೆಯಲ್ಲಿ ಸಹಾಯ ಮಾಡಲು ನಾವು ಒಗ್ಗೂಡುವ ಮಹತ್ವವನ್ನು ನೆನಪಿಸಿಕೊಳ್ಳುತ್ತೇವೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ 20,00,000 ರೂಪಾಯಿ(ಇಪ್ಪತ್ತು ಲಕ್ಷ ರೂಪಾಯಿಗಳು)ನೀಡುತ್ತಿದ್ದೇವೆ. ನಮ್ಮ ಸರ್ಕಾರ, ಸ್ವಯಂಸೇವಕರು, ರಕ್ಷಣಾ ತಂಡಗಳು ಮತ್ತು ಇತರ ಹಲವು ಸಂಘಟಿತ ಸಂಸ್ಥೆಗಳು ಅಗತ್ಯವಿರುವವರಿಗೆ ಪ್ರಮುಖ ನೆರವು ಮತ್ತು ಸಹಾಯವನ್ನು ಒದಗಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ವಯನಾಡಿನಲ್ಲಿ ಉಂಟಾದ ನಷ್ಟವನ್ನು ಹೊಂದಿಸಲು ಸಾಧ್ಯವಿಲ್ಲ ಎಂಬ ಶಿರ್ಷಿಕೆಯೊಂದಿಗೆ ತಮ್ಮ ಹೇಳಿಕೆಯನ್ನು ಹಂಚಿಕೊಂಡಸಿದ್ದಾರೆ.
ನಯನತಾರಾ ಮತ್ತು ವಿಘ್ನೇಶ್ ಅವರಲ್ಲದೆ, ತಮಿಳು ನಟರಾದ ಸೂರ್ಯ ಮತ್ತು ವಿಕ್ರಮ್, ಮಲಯಾಳಂ ನಟರಾದ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್, ಫಹದ್ ಫಾಸಿಲ್ ಮತ್ತು ನಜ್ರಿಯಾ ಕೂಡ ತಮ್ಮ ಬೆಂಬಲವನ್ನು ನೀಡಿದ್ದು, ಕೇರಳ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.