ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಬಿಜೆಪಿ ವಿರುದ್ಧ ಒಂದಾದ ವಿಪಕ್ಷಗಳು ಬೆಂಗಳೂರಿನಲ್ಲಿ ಸಭೆ ಸೇರಿದ್ದು, ಈ ವೇಳೆ ಪ್ರಧಾನ ಮಂತ್ರಿ ಸ್ಥಾನದ ಕಾಂಗ್ರೆಸ್ಗೆ (Congress) ಆಸಕ್ತಿಯಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಸ್ಪಷ್ಟಪಡಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಒಗ್ಗಟ್ಟವನ್ನು ಕೆಳಗಿಳಿಸಿ ಅಧಿಕಾರಕ್ಕೇರಲು ಯುಪಿಎ ಮೈತ್ರಿಕೂಟ ಸಭೆ ಮಾಡುತ್ತಿದೆ.
ಈ ವೇಳೆ ಮಾತನಾಡಿದ ಖರ್ಗೆ, ಪ್ರಧಾನ ಮಂತ್ರಿ ಸ್ಥಾನ ಕೂಡ ಕಾಂಗ್ರೆಸ್ಗೆ ಅಗತ್ಯವಿಲ್ಲ. ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ರಕ್ಷಣೆ ಮಾತ್ರ ನಮ್ಮ ಉದ್ದೇಶ. ನಮ್ಮ ಒಕ್ಕೂಟದ ಬಳಿಕ ಬಿಜೆಪಿ ತನ್ನ ಸ್ನೇಹಿತರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದೆ. ಇದು ನಮ್ಮ ಮೊದಲ ಗೆಲುವು ಎಂದು ಹೇಳಿದರು.
ಕೆಲವು ರಾಜ್ಯಗಳಲ್ಲಿ ನಮ್ಮ ನಮ್ಮ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಆದರೆ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕಿದೆ. ಸಾಮಾನ್ಯ ಜನರ ಸಂಕಷ್ಟ ಪರಿಹಾರದ ಸಲುವಾಗಿ ನಮ್ಮ ಭಿನ್ನಾಭಿಪ್ರಾಯ ದೂರವಿಟ್ಟು ಕೆಲಸ ಮಾಡಬೇಕಿದೆ. ದಲಿತರು, ಆದಿವಾಸಿಗಳ ಸಲುವಾಗಿ ನಮ್ಮ ಬೇಧಗಳನ್ನು ದೂರವಿಟ್ಟು ಒಟ್ಟಾಗಿ ಕೆಲಸ ಮಾಡೋಣ ಎಂದು ವಿಪಕ್ಷಗಳ ನಾಯಕರಿಗೆ ಕರೆ ನೀಡಿದರು.
ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಸಿಬಿಐ, ಇಡಿಯನ್ನು ಬಳಸುತ್ತಿದೆ. ವಿಪಕ್ಷಗಳ ನಾಯಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ. ಕಾನೂನು ದುರುಪಯೋಗ ಮಾಡಿಕೊಂಡು ನಮ್ಮ ಸಂಸದರನ್ನೇ ಅಮಾನತು ಮಾಡಿದ್ದಾರೆ. ಶಾಸಕರನ್ನು ಹಣ, ತನಿಖಾ ಸಂಸ್ಥೆಗಳ ಮೂಲಕ ಬೆದರಿಸಲಾಗುತ್ತಿದೆ. ಈ ಮೂಲಕ ಬಿಜೆಪಿ ಕಡೆ ಸೆಳೆದುಕೊಳ್ಳಲು ಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.